ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆಯಲ್ಲಿ ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕನ ಮೇಲೆ ಎರಡು ಕರಡಿಗಳು ಭಾನುವಾರ ಬೆಳಿಗ್ಗೆ ದಾಳಿ ನಡೆಸಿವೆ.
ತಟ್ಟೆಕೆರೆ ಕಾಲೊನಿ ನಿವಾಸಿ ಕುರುಬರ ರಾಜು (40) ಕರಡಿ ದಾಳಿಯಿಂದ ತೀವ್ರ ಗಾಯಗೊಂಡಿದ್ದಾರೆ.
ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳಿಗ್ಗೆ 7 ಗಂಟೆಯ ಸಮಯದಲ್ಲಿ ತಟ್ಟೆಕೆರೆ ಕಾಲೊನಿಯಿಂದ ಜಾಗಲೆ ತೋಟವೊಂದಕ್ಕೆ ಕಾಫಿ ಹಣ್ಣು ಕೀಳಲು ರಾಜು ತೆರಳುತ್ತಿದ್ದರು. ಈ ಸಮಯದಲ್ಲಿ ಕರಡಿ ದಾಳಿ ನಡೆಸಿದೆ.
ದಾಳಿಗೆ ಹೆದರಿದ ರಾಜು ಜೋರಾಗಿ ಕಿರುಚಿಕೊಂಡಿದ್ದಾರೆ. ತಕ್ಷಣವೇ ಸಮೀಪದಲ್ಲಿದ್ದ ಹಾಡಿ ನಿವಾಸಿಗಳು ರಾಜು ಕಿರಿಚಿದ ಶಬ್ದ ಆಲಿಸಿ, ಓಡಿ ಬಂದಾಗ ಕರಡಿಗಳು ಕಾಡಿನ ಒಳಗೆ ಓಡಿಹೋಗಿದೆ ಎಂದು ಹಾಡಿ ನಿವಾಸಿ ರಾಮು ಮಾಹಿತಿ ನೀಡಿದ್ದಾರೆ.
ಆನೆ, ಹುಲಿ ದಾಳಿಗಳಿಂದ ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಕರಡಿ ದಾಳಿಯಿಂದ ಬೆಳೆಗಾರರು, ರೈತರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂರ್ಯ ಅಯ್ಯಪ್ಪ ಒತ್ತಾಯಿಸಿದ್ದಾರೆ.