ಹುಣಸೂರು: ‘ಹಲವು ಜನಪ್ರತಿನಿಧಿಗಳು ಕೋವಿಡ್ ನೆಪವೊಡ್ಡಿ ‘ಬೆಳೆ ರಜೆ’ ಘೋಷಣೆಗೆ ಒತ್ತು ನೀಡಿದ್ದರೂ ಈ ಹಂತದಲ್ಲಿ ರೈತನಿಗೆ ವಿಶ್ವಾಸ ತುಂಬಿದ್ದರಿಂದ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಬೆಳೆದಿದ್ದು, ಮಾರುಕಟ್ಟೆ ಆರಂಭವಾಗಿದೆ’ ಎಂದು ಸಂಸದ ಪ್ರತಾಪಸಿಂಹ ಹೇಳಿದರು.
ತಾಲ್ಲೂಕಿನ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬುಧವಾರ ಪ್ರಸಕ್ತ ಸಾಲಿನ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಏಪ್ರಿಲ್ ತಿಂಗಳಲ್ಲಿ ಎದುರಾದ ಕೋವಿಡ್ ಆತಂಕ ಕೃಷಿ ಮೇಲೂ ಆವರಿಸಿತ್ತು. ಆ ಹಂತದಲ್ಲಿ ರೈತರಿಗೆ ಧೈರ್ಯ ಮತ್ತು ವಿಶ್ವಾಸ ತುಂಬಿ ತಂಬಾಕು ಬೆಳೆಯಲು ಹೇಳಲಾಗಿತ್ತು ಅದು ಫಲ ನೀಡಿದೆ’ ಎಂದರು.
‘ಮಾರುಕಟ್ಟೆ ಆರಂಭದಲ್ಲಿ ಸಿಗುವ ದರ ನಂತರದಲ್ಲಿ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದು, ಇದಕ್ಕೆ ಈ ಸಾಲಿನಲ್ಲಿ ಕಡಿವಾಣ ಹಾಕಲಾಗಿದೆ. ಕಂಪನಿಯೊಂದಿಗೆ ಮಾತನಾಡಿದ್ದು ಆರಂಭದಲ್ಲಿ ನೀಡುವ ಸರಾಸರಿ ದರ ಅಂತ್ಯದವರೆಗೂ ಕಾದುಕೊಳ್ಳುವಂತೆ ಸೂಚಿಸಲಾಗಿದೆ’ ಎಂದರು.
‘ತಂಬಾಕು ಮಂಡಳಿ ಅಧ್ಯಕ್ಷರ ಸೂಚನೆ ಮೇಲೆ ಕಗ್ಗುಂಡಿ ಮತ್ತು ಚಿಲ್ಕುಂದ ಹರಾಜು ಮಾರುಕಟ್ಟೆ ಸೆ 30ಕ್ಕೆ ಆರಂಭಿಸಿದ್ದು, ಉಳಿದ ಹರಾಜು ಮಾರುಕಟ್ಟೆ ಅ. 7ರಂದು ಆರಂಭವಾಗಲಿದೆ. ಇಂದಿನ ಮಾರುಕಟ್ಟೆಗೆ 5 ಕಂಪನಿಗಳು ಭಾಗವಹಿಸಿದ್ದು, ಆಂಧ್ರಪ್ರದೇಶ ಮಾರುಕಟ್ಟೆ ಮುಕ್ತಾಯವಾದ ಬಳಿಕ ರಾಜ್ಯಕ್ಕೆ 21 ಕಂಪನಿಗಳು ಭಾಗವಹಿಸಲಿದೆ’ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗಣ್ಣ, ರಾಜ್ಯ ಕೊಳಚೆ ನಿರ್ಮೂಲನೆ ಮಂಡಳಿ ಸದಸ್ಯ ಆರ್.ಟಿ.ಸತೀಶ್, ಡಾ.ಪ್ರಕಾಶ್ ಬಾಬು, ಜಿಲ್ಲಾ ಘಟಕದ ಉಪಾಧ್ಯಕ್ಷ ರಾಜೇಗೌಡ, ತಂಬಾಕು ಮಂಡಳಿ ಅಧಿಕಾರಿ ಮಂಜುನಾಥ್, ಸಿದ್ದರಾಜು ಹಬ್ಬನಕುಪ್ಪೆ ದಿನೇಶ್ ಸೇರಿದಂತೆ ಇತರರು ಇದ್ದರು.