ಕೆ.ಆರ್.ನಗರ: ತಾಲ್ಲೂಕಿನ ಹಂಪಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಲಕ್ಷ್ಮಿ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವವು ಬುಧವಾರ (ಮೇ 22) ಜರುಗಲಿದೆ.
ತಾಲ್ಲೂಕು ಕೇಂದ್ರದಿಂದ ಹಂಪಾಪುರವು ಸುಮಾರು 5 ಕಿ.ಮೀ ದೂರದಲ್ಲಿದೆ. ಬಿಳಿಕೆರೆ-ಬೇಲೂರು ರಾಜ್ಯ ಹೆದ್ದಾರಿಯಲ್ಲಿ, ಹಳೆ ಯಡತೊರೆ ಅರ್ಕೇಶ್ವರ ಸ್ವಾಮಿ ದೇವಸ್ಥಾನ ಮತ್ತು ಕಾವೇರಿ ನದಿಗೆ ಹೊಂದಿಕೊಂಡಂತಿದೆ.
ಬುಧವಾರ ಬೆಳಿಗ್ಗೆ 11.30 ರಿಂದ 12.10ರ ಒಳಗೆ ಸಲ್ಲುವ ಶುಭ ಅಭಿಜಿನ್ ಲಗ್ನದಲ್ಲಿ ಬ್ರಹ್ಮ ರಥೋತ್ಸವ ನಡೆಯಲಿದೆ. ಮೈಸೂರು, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಹರಕೆ ಸಲ್ಲಿಸುತ್ತಾರೆ.
ರಥೋತ್ಸವ ಪ್ರಯುಕ್ತ ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ. ಹರಕೆ ಹೊತ್ತು ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಐತಿಹಾಸಿಕ ಹಿನ್ನೆಲೆ: ಚೋಳರ ಕಾಲದಲ್ಲಿ ನಿರ್ಮಾಣವಾದ ಪುರಾತನ ದೇವಾಲಯದಲ್ಲಿ ಲಕ್ಷ್ಮಿನಾರಾಯಣ ಬ್ರಹ್ಮ ರಥೋತ್ಸವವು ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಮುಜರಾಯಿ ಇಲಾಖೆಗೆ ದೇವಸ್ಥಾನ ಸೇರಿದೆ’ ಎಂದು ಅರ್ಚಕ ಶ್ರೀನಿವಾಸ್ ಐಯ್ಯಂಗಾರ್ ತಿಳಿಸುತ್ತಾರೆ.
₹ 2 ಲಕ್ಷ ವೆಚ್ಚದಲ್ಲಿ ಹೊಸ ತೇರು ನಿರ್ಮಾಣ ಮಾಡಲಾಗುತ್ತಿದೆ. ಅದರಂತೆ ಪ್ರತಿ ವರ್ಷ ದಾನಿಗಳಿಂದಲೇ ರಥೋತ್ಸವ ನಡೆಸಲಾಗುತ್ತಿದೆ ಎಂದು ಅವರು ಹೇಳುತ್ತಾರೆ.
ಮೇ 17ರಿಂದ ಪ್ರತಿ ದಿನ ಸಂಜೆ 6ರಿಂದ ರಾತ್ರಿ 9ರವರೆಗೆ ಅಂಕುರಾರ್ಪಣ, ರಕ್ಷಾ ಬಂಧನ, ಧ್ವಜಾರೋಹಣ, ಭೇರಿತಾಡನ, ಚಂದ್ರಮಂಡಲ ಉತ್ಸವ, ಹನುಮಂತ ವಾಹನ ಉತ್ಸವ, ಗರುಡೋತ್ಸವ, ತಿರುವೀದಿ ಉತ್ಸವಗಳು ನಡೆದಿವೆ.
ಮೇ 27ರವರೆಗೆ ಕಲ್ಯಾಣೋತ್ಸವ, ಗಜೇಂದ್ರಮೋಕ್ಷ, ಆನೆ ವಾಹನೋತ್ಸವ, ತೇರಡಿ ಉತ್ಸವ, ತಿರುಮಂಜನಿ ಉತ್ಸವ, ಅಶ್ವ ವಾಹನ, ಪೂರ್ಣಾಹುತಿ, ತೆಪ್ಪೋತ್ಸವ, ಮಹಾಭಿಷೇಕ, ಪುಷ್ಪಯಾಗ, ಶಯನೋತ್ಸವ, ಸುಪ್ರಭಾತ ಸೇವೆ, ವಿಶ್ವರೂಪ ದರ್ಶನ, ರಾಜಾಶೀರ್ವಾದ ಸೇರಿದಂತೆ ಹಲವು ಉತ್ಸವಗಳೂ ನಡೆಯಲಿವೆ.