ಮೈಸೂರು: ಮೈಸೂರು ತಾಲ್ಲೂಕಿನ ವಾಜಮಂಗಲ-ವರಕೋಡು ಗ್ರಾಮದ ನಡುವಿನ ಅಪ್ಪಗೆರೆ ಕೆರೆ ಏರಿ ಮೇಲ್ಭಾಗದ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ಬೈಕ್ಗಳ ನಡುವೆ ನಡೆದ ಮುಖಾಮುಖಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ವರಕೋಡು ಗ್ರಾಮದ ನಿವಾಸಿ ಪಲ್ಲವಿ(29) ಮೃತಪಟ್ಟವರು.
ಪಲ್ಲವಿ ಮೈಸೂರಿನ ಸೀರೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪತಿ ಮಹದೇವ್ ಜೊತೆಗೆ ಕೆಲಸಕ್ಕೆಂದು ಬೆಳಿಗ್ಗೆ 9 ಗಂಟೆ ಸಮಯದಲ್ಲಿ ವರಕೋಡು ಕಡೆಯಿಂದ ಮೈಸೂರಿಗೆ ಬರುವಾಗ, ವಾಜಮಂಗಲ ಗ್ರಾಮದ ಕಡೆಯಿಂದ ವೇಗವಾಗಿ ಬಂದ ಮತ್ತೊಂದು ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಎರಡೂ ದ್ವಿಚಕ್ರ ವಾಹನದ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಪಲ್ಲವಿ ಮೃತಪಟ್ಟಿದ್ದಾರೆ ಎಂದು ವರುಣಾ ಠಾಣೆಯ ಪೊಲೀಸರು ತಿಳಿಸಿದ್ದಾರೆ.