ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೇನೆಯ ತ್ಯಾಗ, ಬಲಿದಾನದ ಮಾತು ಹೇಳಿ ಮತಯಾಚಿಸುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಭಾರತ ಮತ್ತೊಂದು ಪಾಕಿಸ್ತಾನ ಆಗಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದರು.
ಹುತಾತ್ಮ ಯೋಧರಿಗಾಗಿ ಮತದಾನ ಮಾಡಿ ಎನ್ನುವ ಮೋದಿ ಮಾತನ್ನು ಕೇಳಿ ಚುನಾವಣೆ ಆಯೋಗ ಸುಮ್ಮನಿದೆ. ಅದೇನು ನಿದ್ದೆ ಮಾಡುತ್ತಿದ್ದೆಯೇ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಸೇನೆಯ ತ್ಯಾಗ, ಬಲಿದಾನಗಳನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವುದು ಮುಂದುವರಿದರೆ ಮುಂದೊಂದು ದಿನ ಸೇನೆಯೂ ರಾಜಕೀಯದಲ್ಲಿ ಮೂಗು ತೂರಿಸುವ ಅಪಾಯ ಇದೆ ಎಂದು ಎಚ್ಚರಿಸಿದರು.
ಈಗಾಗಲೇ ‘ನಮೋ ಟಿವಿ’ ಬಂದಾಗಿದೆ. ದೂರು ಬರುವವರೆಗೂ ಚುನಾವಣಾ ಆಯೋಗ ಸುಮ್ಮನಿರುತ್ತದೆ. ಈಗಾಗಲೇ ಸಿಬಿಐ ’ನಮೋ’ ಆಗಿದೆ. ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ಎಲ್ಲ ಸ್ವಾಯತ್ತ ಸಂಸ್ಥೆಗಳೂ ‘ನಮೋ’ ಆಗುವ ಅಪಾಯ ಇದೆ. ಏಕವ್ಯಕ್ತಿಯ ವೈಭವೀಕರಣ ದೇಶಕ್ಕೆ ಮಾರಕ ಎಂದು ಹೇಳಿದರು.
‘ಪತ್ರಕರ್ತರ ಮೇಲೆ ದಾಳಿಯಾದರೆ ನಾನು ಹೊಣೆಯಲ್ಲ’ ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನಿಜಕ್ಕೂ ಬೇಜವಾಬ್ದಾರಿತನದಿಂದ ಕೂಡಿದೆ. ಇದನ್ನು ನಾನು ಒಪ್ಪುವುದಿಲ್ಲ ಎಂದರು.