ಮೈಸೂರು:‘ರಕ್ತದಾನ ಶ್ರೇಷ್ಠವಾದುದು. ಏಕೆಂದರೆ, ಇದರಿಂದ ಪ್ರಾಣ ಉಳಿಸಬಹುದಾಗಿದೆ’ ಎಂದು ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಾಯಿನಾಥ್ ಮಲ್ಲಿಗೆಮಾಡು ಹೇಳಿದರು.
ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಮೈಸೂರು ಮಕ್ಕಳ ಕೂಟ, ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕಾಲೇಜಿನ ಎನ್ಎಸ್ಎಸ್ ಘಟಕ ಮತ್ತು ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ನಗರದ ಕೃಷ್ಣಮೂರ್ತಿಪುರಂನ ಎಸ್ಡಿಎಂ ಕಾಲೇಜು ಆವರಣದಲ್ಲಿ ನಡೆದ ರಕ್ತ ದಾನ ಶಿಬಿರದಲ್ಲಿ ಅವರು ಮಾತನಾಡಿದರು.
‘ಯುವಜನರು ರಕ್ತದಾನಕ್ಕೆ ಮುಂದಾಗಬೇಕು. ಆರೋಗ್ಯವಂತರೆಲ್ಲರೂ ನೀಡಬಹುದು. ಇದರಿಂದ ಮತ್ತೊಬ್ಬರ ಪ್ರಾಣ ಉಳಿಸುವ ಜತೆಗೆ ಆರೋಗ್ಯ ಕಾಪಾಡಿಕೊಳ್ಳಲೂಬಹುದು. ರಕ್ತಕ್ಕೆ ಪರ್ಯಾಯವಿಲ್ಲ. ಸಾವಿನ ಅಂಚಿನಲ್ಲಿರುವವರ ಜೀವ ಉಳಿಸಬೇಕಾದರೆ ದಾನದಿಂದಲೇ ಪಡೆಯಬೇಕಾಗುತ್ತದೆ. ಆದ್ದರಿಂದ ಸ್ವಯಂಪ್ರೇರಿತವಾಗಿ ದಾನಕ್ಕೆ ಮುಂದಾಗಬೇಕು. 18ರಿಂದ 60 ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರು ಪ್ರತಿ ಮೂರು ತಿಂಗಳಿಗೊಮ್ಮೆ ದಾನ ಮಾಡುವುದು ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.
‘ಒಂದು ಯೂನಿಟ್ ರಕ್ತದಿಂದ ನಾಲ್ವರ ಪ್ರಾಣ ಉಳಿಸಬಹುದು’ ಎಂದರು.
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ‘ಅಗತ್ಯ ಉಂಟಾದಾಗ ಮಾತ್ರ ರಕ್ತದ ಮಹತ್ವ ಪ್ರತಿಯೊಬ್ಬರಿಗೂ ಅರಿವಾಗುತ್ತದೆ. ರಕ್ತ ದಾನದ ಕುರಿತ ಮೌಢ್ಯಗಳನ್ನು ಹೋಗಲಾಡಿಸಬೇಕು’ ಎಂದು ನುಡಿದರು.
100 ವಿದ್ಯಾರ್ಥಿನಿಯರು ರಕ್ತ ದಾನ ಮಾಡಿದರು.
ಜೀವಧಾರ ರಕ್ತನಿಧಿ ಕೇಂದ್ರದ ವೈದ್ಯಕೀಯ ಅಧಿಕಾರಿ ಡಾ.ಮಾನಸ ರಾಜ್, ಪ್ರೊ.ಕೆ.ಎಸ್. ಸುಕ್ರೋಸ್, ಬಿ.ಎನ್. ಮಾರುತಿ ಪ್ರಸನ್ನ ಪಾಲ್ಗೊಂಡಿದ್ದರು.