ಮೈಸೂರು: ‘ಹಿರಿಯರ ಕೊಡುಗೆಗಳನ್ನು ಸ್ಮರಿಸುವುದು ನಮ್ಮ ಧರ್ಮ. ಅದಕ್ಕೆ ಸಮಯ ಇಲ್ಲವೆಂದು ಇಂದಿನ ಯುವ ಪೀಳಿಗೆಯು ದೂರ ಉಳಿಯುತ್ತಿರುವುದು ಸರಿಯಲ್ಲ’ ಎಂದು ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಎಚ್.ಸಿ.ದಾಸಪ್ಪ ವಿಚಾರ ಸಂಸ್ಥೆ ಸಹಯೋಗದಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಎಸ್.ಪ್ರಕಾಶ್ಬಾಬು ವಿರಚಿತ ‘ಮೈಸೂರು ಗಾಂಧಿ ಎಚ್.ಸಿ.ದಾಸಪ್ಪ’ ಮತ್ತು ‘ಕಿಂಗ್ ಮೇಕರ್ ಸಾಹುಕಾರ್ ಚೆನ್ನಯ್ಯ’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಹಿರಿಯರ ಆದರ್ಶ–ಮಾರ್ಗದರ್ಶನದಂತೆ ಕೆಲಸ ಮಾಡಬೇಕು’ ಆಶಿಸಿದರು.
‘ದಾಸಪ್ಪ ಮತ್ತು ಸಾಹುಕಾರ್ ಚೆನ್ನಯ್ಯ ಅವರ ಕಾಲದಲ್ಲಿ ಬಹಳ ಪ್ರಸಿದ್ಧಿ ಪಡೆದಿದ್ದರು’ ಎಂದು ಹೇಳಿದರು.
ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ‘ದಾಸಪ್ಪ ಮತ್ತು ಚೆನ್ನಯ್ಯ ಮೇರು ವ್ಯಕ್ತಿತ್ವದವರು. ಜೀವನುದ್ದಕ್ಕೂ ಆದರ್ಶವನ್ನು ಇಟ್ಟುಕೊಂಡು ಬದುಕಿದವರು. ಸ್ವಾತಂತ್ರ್ಯ ಚಳವಳಿಯ ಸಂದರ್ಭ ಮತ್ತು ನಂತರದ ದಿನಗಳಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿರುವ ಬಗ್ಗೆ ಪ್ರಕಟಿಸಿರುವ ಕೃತಿ ಮೌಲ್ಯಯುತವಾಗಿದೆ’ ಎಂದು ತಿಳಿಸಿದರು.
ನಿವೃತ್ತ ಕುಲಪತಿ ಪ್ರೊ.ಪದ್ಮಾಶೇಖರ್ ಪುಸ್ತಕ ಕುರಿತು ಮಾತನಾಡಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮುಖಂಡ ಡಿ.ಮಾದೇಗೌಡ, ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಿ.ವಿಶ್ವನಾಥ್, ಎಚ್.ಸಿ.ದಾಸಪ್ಪ, ವಿಚಾರ ಸಂಸ್ಥೆ ಕಾರ್ಯದರ್ಶಿ ಸರೋಜಾ ತುಳಸಿದಾಸ್ ಇದ್ದರು.