ಮೈಸೂರು: ಪರಿಶಿಷ್ಟ ಪಂಗಡದವರಿಗೆ ಶೇ 7.5ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ನೇತೃತ್ವದಲ್ಲಿ ಕಾರ್ಯಕರ್ತರು ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಶೇ 10ಕ್ಕೂ ಪರಿಶಿಷ್ಟ ಜನಾಂಗದವರಿದ್ದಾರೆ. ಇವರಿಗೆ ಸಂವಿಧಾನಬದ್ಧವಾಗಿ ಮೀಸಲಾತಿ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.
‘ಈ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಾಯಕ ಸಮುದಾಯದ ಮುಖಂಡರು ರಾಜನಹಳ್ಳಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುತ್ತಾ ಬರುತ್ತಿದ್ದಾರೆ. ಆದರೂ, ನಮ್ಮ ಬೇಡಿಕೆ ಈಡೇರಿಲ್ಲ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಪಕ್ಷದ ವಿಭಾಗೀಯ ಉಸ್ತುವಾರಿ ಭೀಮನಹಳ್ಳಿ ಸೋಮೇಶ್, ವಲಯ ಉಸ್ತುವಾರಿ ಸೋಸಲೆ ಸಿದ್ಧರಾಜು, ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ, ಪಡುವಾರಹಳ್ಳಿ ರಾಮಕೃಷ್ಣ, ರಾಹುಲ್, ಶಿವಕುಮಾರ್, ಪ್ರತಾಪ್, ನಾಗರಾಜು ನಾಗನಹಳ್ಳಿ ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿದ್ದರು.
ಮಿದುಳು ಜ್ವರ; ₹ 10 ಲಕ್ಷ ಪರಿಹಾರಕ್ಕೆ ಒತ್ತಾಯ ಮೈಸೂರು: ಬಿಹಾರದಲ್ಲಿ ಮಿದುಳು ಜ್ವರದಿಂದ ಮೃತಪಟ್ಟ ಎಲ್ಲ ಮಕ್ಕಳ ಪೋಷಕರಿಗೆ ₹ 10 ಲಕ್ಷ ಪರಿಹಾರ ನೀಡಬೇಕು ಎಂದು ಎಸ್ಯುಸಿಐ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಚಿಕ್ಕಗಡಿಯಾರದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ಇದು ಬಿಹಾರದ ಆರೋಗ್ಯ ವ್ಯವಸ್ಥೆಯ ಸಂಪೂರ್ಣ ವೈಫಲ್ಯ. ಇಡೀ ದೇಶದಾದ್ಯಂತ ಈ ಕುರಿತು ಪ್ರತಿಭಟನೆ ನಡೆಸಲಾಗುತ್ತಿದೆ. ಇನ್ನಾದರೂ ಎಲ್ಲ ರಾಜ್ಯ ಸರ್ಕಾರಗಳು ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸೂಕ್ತ ಮುನ್ನಚ್ಚರಿಕೆ ವಹಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಆರೋಗ್ಯ ವ್ಯವಸ್ಥೆ ಹದಗೆಡಲು ಕೇವಲ ಬಿಹಾರ ಸರ್ಕಾರ ಮಾತ್ರ ಕಾರಣವಲ್ಲ. ಇದಕ್ಕೆ ಕೇಂದ್ರವೂ ಕಾರಣವಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ಎರಡೂ ಸರ್ಕಾರಗಳ ಆದ್ಯ ಕರ್ತವ್ಯ ಎಂದು ಅವರು ಹೇಳಿದರು.