ಎಚ್.ಡಿ.ಕೋಟೆ: ತಾಲ್ಲೂಕಿನ ಅಂತರಸಂತೆ ಅರಣ್ಯ ವಲಯದ ಸೂಕ್ಷ್ಮ ಪ್ರದೇಶದಲ್ಲಿ ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಿಸಲಾಗುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಮಾಲೀಕರಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ.
ಅಂತರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಗಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರಿಯಾಜ್ ಖಾನ್ ಲೋದಿ ಬಿನ್ ಎಲ್.ಇ.ರಹೀಮ್ ಖಾನ್ ಎಂಬುವವರು ತಮಗೆ ಸೇರಿದ ಸರ್ವೆ ನಂ.39ರಲ್ಲಿ ವಾಸದ ಮನೆ ನಿರ್ಮಿಸುತ್ತೇವೆಂದು ಅನುಮತಿ ಪಡೆದು ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಟ್ಟಡದ ಜಾಗ ಅಂತರಸಂತೆ ವನ್ಯಜೀವಿ ವಲಯದ ಗಡಿಯಿಂದ ಕೇವಲ 2.6 ಕಿ.ಮೀ ದೂರದಲ್ಲಿದ್ದು, ಸೂಕ್ಷ್ಮ ಪರಿಸರ ಪ್ರದೇಶಕ್ಕೆ ಬರುತ್ತದೆ. ಇಲ್ಲಿ ವಾಣಿಜ್ಯ ಉದ್ದೇಶಕ್ಕೆ ಯಾವುದೇ ಕಟ್ಟಡ ನಿರ್ಮಾಣ ಮಾಡಬಾರದು ಎಂಬ ಸರ್ಕಾರದ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯೂ 2011ರ ಫೆ. 9ರಂದು ಹೊರಡಿಸಿದ ಮಾರ್ಗಸೂಚಿಯಂತೆ ನೋಟಿಸ್ ನೀಡಿದ್ದಾರೆ.
ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇತರೆ ಇಲಾಖೆಗಳಿಂದ ಪಡೆದಿರುವ ನಿರಾಕ್ಷೇಪಣಾ ಪತ್ರ, ಭೂ ಪರಿವರ್ತನೆ ಸಂಬಂಧಿಸಿದ ದಾಖಲೆಗಳು, ಕಟ್ಟಡ ಯೋಜನಾ ನಕ್ಷೆ ಸೇರಿದಂತೆ ಇತರೆ ದಾಖಲೆಗಳನ್ನು ಕೂಡಲೇ ಅರಣ್ಯ ಇಲಾಖೆಯ ಕಚೇರಿಗೆ ಸಲ್ಲಿಸುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ.