ಮೈಸೂರು: ನಗರದಲ್ಲಿ ಪೂರ್ವ ಮುಂಗಾರು ಮಳೆ ಚುರುಕಾದರೂ ತರಕಾರಿಗಳ ಬೆಲೆಗಳು ಕಡಿಮೆ ಆಗಿಲ್ಲ. ಅತ್ತ ತಮಿಳುನಾಡಿನಲ್ಲೂ ಮಳೆಯ ಕೊರತೆ ಉಂಟಾಗಿರುವುದರಿಂದ ಕ್ಯಾರೆಟ್ ಉತ್ಪಾದನೆಯ ಮೇಲೂ ಹೊಡೆತ ಬಿದ್ದಿದೆ.
ನಗರಕ್ಕೆ ತಮಿಳುನಾಡಿನಿಂದ ಆವಕವಾಗುತ್ತಿರುವ ಕ್ಯಾರೆಟ್ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಕ್ಯಾರೆಟ್ ಬೆಲೆ ಶುಕ್ರವಾರ ₹ 50 ಆಗಿತ್ತು.
ಉಳಿದಂತೆ, ಬೀನ್ಸ್ ಸಗಟು ಬೆಲೆ ಕೆ.ಜಿಗೆ ₹ 60ರಲ್ಲೇ ಮುಂದುವರಿದಿದೆ. ಹಸಿಮೆಣಸಿನಕಾಯಿ ದರವೂ ₹ 50ರಲ್ಲೇ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನಷ್ಟು ಹೆಚ್ಚಿದೆ. ಇದರಿಂದ ಶುಭ ಸಮಾರಂಭ ಮಾಡುವವರು, ಗ್ರಾಹಕರು ಹೈರಣಾಗಿದ್ದಾರೆ.
‘ಸದ್ಯಕ್ಕೆ ಯಾವುದೇ ಒಂದು ತರಕಾರಿಯ ಬೆಲೆಯೂ ಕಡಿಮೆ ಎಂದು ಹೇಳುವಂತಹ ಪರಿಸ್ಥಿತಿಯಲ್ಲಿ ಇಲ್ಲ. ಇದು ಪೂರ್ವ ಮುಂಗಾರು ಮಳೆಯ ಕೊರತೆಯ ಪರಿಣಾಮ’ ಎಂದು ವರುಣಾದ ರೈತ ಪುಟ್ಟಸ್ವಾಮಿ ಹೇಳುತ್ತಾರೆ.
ತೊಗರಿಬೇಳೆ ದರ ಏರಿಕೆ: ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ತೊಗರಿಬೇಳೆ ಧಾರಣೆ ಕಳೆದ ವಾರ ₹ 90 ಇದ್ದದ್ದು ಈಗ ₹ 94ಕ್ಕೆ ಹೆಚ್ಚಳವಾಗಿದೆ. ₹ 80ರಲ್ಲಿದ್ದ ಉದ್ದಿನಬೇಳೆ ₹ 82ಕ್ಕೆ ಏರಿಕೆ ಕಂಡಿದೆ. ಹೆಸರುಕಾಳು ಕೆ.ಜಿಗೆ ₹ 84 ಹಾಗೂ ಹೆಸರುಬೇಳೆ ₹ 86ರಲ್ಲೇ ಮುಂದುವರಿದಿವೆ.