ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದ ಅರಣ್ಯಕ್ಕೆ ತಂತಿಬೇಲಿ ಹಾಕಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಈಗಾಗಲೇ ಟೆಂಡರ್ ಕರೆದಿದೆ. ಒಂದು ತಿಂಗಳಿನಲ್ಲಿ ಕಾಮಗಾರಿ ಆರಂಭವಾಗಲಿದೆ.
ಚಾಮುಂಡಿಬೆಟ್ಟದ ಮೇಲ್ಭಾಗದಲ್ಲಿ ಒತ್ತುವರಿ ಎನ್ನುವುದು ಸಾಮಾನ್ಯವಾಗಿತ್ತು. ದಿನೇ ದಿನೇ ಒಂದಿಷ್ಟು ಜಾಗ ಒತ್ತುವರಿದಾರರ ಪಾಲಾಗುತ್ತಿತ್ತು. ಇದನ್ನು ಮನಗಂಡ ಅರಣ್ಯ ಇಲಾಖೆ ಬೆಟ್ಟದ ಮೇಲೆ 1 ಕಿ.ಮೀ ನಷ್ಟು ಸುತ್ತಳತೆಯಲ್ಲಿ ತಂತಿಬೇಲಿ ಹಾಕಲು ನಿರ್ಧರಿಸಿದೆ. ಒಟ್ಟು ಈ ಕಾಮಗಾರಿಯ ಮೊತ್ತ ₹ 28 ಲಕ್ಷ. ಹಂತ ಹಂತವಾಗಿ ತಂತಿಬೇಲಿಯ ಉದ್ದವನ್ನು ಹೆಚ್ಚಿಸಲಾಗುತ್ತದೆ.
ಒತ್ತುವರಿ ತಡೆಯುವುದು ಒಂದು ಉದ್ದೇಶವಾದರೆ, ವನ್ಯಜೀವಿಗಳು ಚಾಮುಂಡಿಬೆಟ್ಟ ಗ್ರಾಮಕ್ಕೆ ಬರುವುದನ್ನು ತಡೆಯುವುದು ಮತ್ತೊಂದು ಉದ್ದೇಶ. ಇದರಿಂದ ಗ್ರಾಮಸ್ಥರಿಗೂ ವನ್ಯಜೀವಿಗಳ ಹಾವಳಿಯಿಂದ ಮುಕ್ತಿ ಸಿಗುತ್ತದೆ ಎಂದು ಡಿಸಿಎಫ್ ಪ್ರಶಾಂತಕುಮಾರ್ ‘ಪ್ರಜಾವಾಣಿ’ ಗೆ ತಿಳಿಸಿದರು.