ಮೈಸೂರು: ಅನರ್ಹ ಶಾಸಕ ಎಚ್.ವಿಶ್ವನಾಥ್ ಹಾಗೂ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರ ಆಣೆ–ಪ್ರಮಾಣ ಪ್ರಹಸನಕ್ಕೆ ಗುರುವಾರ ಚಾಮುಂಡಿಬೆಟ್ಟ ಸಾಕ್ಷಿಯಾಯಿತು.
ಪ್ರಮಾಣದ ಪಂಥಾಹ್ವಾನ ನೀಡಿದ್ದ ಇಬ್ಬರ ಅಬ್ಬರವೂ ಚಾಮುಂಡೇಶ್ವರಿಯ ದರ್ಶನಕ್ಕಷ್ಟೇ ಸೀಮಿತವಾಯಿತು. ಪ್ರತ್ಯೇಕವಾಗಿ ಪೂಜೆ ಸಲ್ಲಿಸಿ ಹೊರ ಬಂದ ಅವರು ಪರಸ್ಪರ ಮುಖ ನೋಡದೇ ವಾಪಸ್ಸಾದರು.
ಒಬ್ಬರ ನಂತರ ಒಬ್ಬರು ಪರಸ್ಪರ ದೋಷಾರೋಪ ಮಾಡಿದ ಪರಿ ಹಾಗೂ ಬಿಗಿ ಪೊಲೀಸ್ ಭದ್ರತೆಯಿಂದ ಭಕ್ತಾದಿಗಳಿಗೆ ತೊಂದರೆಯಾಯಿತಾದರೂ, ಮಾಜಿ ಸಚಿವರಿಬ್ಬರ ಜಟಾಪಟಿಯು ಅವರಿಗೆ ಮನರಂಜನೆ ಒದಗಿಸಿತು.
ಮೊದಲು ಬೆಟ್ಟಕ್ಕೆ ಬಂದ ವಿಶ್ವನಾಥ್, ಪೂಜೆ ಸಲ್ಲಿಸಿ ಆವರಣಕ್ಕೆ ಬಂದು ನಿಂತರು. ಸ್ವಲ್ಪ ಹೊತ್ತಿನ ನಂತರ ಬಂದ ಸಾ.ರಾ.ಮಹೇಶ್, ವಿಶ್ವನಾಥ್ ಅವರತ್ತ ತಿರುಗಿಯೂ ನೋಡದೆ ದೇಗುಲ ಪ್ರವೇಶಿಸಿದರು. ಅವರಿಗಾಗಿ ಸುಮಾರು ಒಂದು ಗಂಟೆ ಕಾಲ ವಿಶ್ವನಾಥ್ ಹೊರಗೇ ಕಾದು ನಿಂತಿದ್ದರು.