ಮೈಸೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಸಭೆಯಲ್ಲಿ ಬಿಜೆಪಿಗೆ ಜೈಕಾರ ಕೂಗುವವರು ನಿಜವಾಗಿಯೂ ಆ ಪಕ್ಷಗಳ ಕಾರ್ಯಕರ್ತರಲ್ಲ. ಅವರು ಬಿಜೆಪಿ ಕಾರ್ಯಕರ್ತರು ಎಂದು ಶಾಸಕ ತನ್ವೀರ್ ಸೇಠ್ ಆರೋಪಿಸಿದರು.
‘ನಾನು ವಿಧಾನಸಭಾ ಚುನಾವಣೆ ವೇಳೆ ಪ್ರಚಾರಕ್ಕೆ ಹೋದಾಗಲೂ ಇದೇ ರೀತಿ ಆಗಿತ್ತು. ಒಂದು ವೇಳೆ ಜೈಕಾರ ಕೂಗಿರುವುದು ಜೆಡಿಎಸ್ ಕಾರ್ಯಕರ್ತರೇ ಆಗಿದ್ದರೆ, ಕಾಂಗ್ರೆಸ್ ಭಿನ್ನಮತೀಯರ ಮೇಲೆ ಮಂಡ್ಯದಲ್ಲಿ ಕೈಗೊಂಡಂತೆ ಜೆಡಿಎಸ್ ಮುಖಂಡರು ಕಠಿಣ ಕ್ರಮ ಕೈಗೊಳ್ಳುವರು ಎಂದು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ದೇಶ ಕಟ್ಟಿದ್ದು ಕಾಂಗ್ರೆಸ್. ಅದರಲ್ಲಿ ದ್ವೇಷ ಹುಟ್ಟಿಸಿದ್ದು ಬಿಜೆಪಿ. ಕಾಂಗ್ರೆಸ್ ಕಟ್ಟಿದ ಗೂಡಿನಲ್ಲಿ ಈಗ ಬಿಜೆಪಿ ಸೇರಿಕೊಂಡು ಎಲ್ಲವನ್ನೂ ತಾನು ಮಾಡಿದ್ದೇನೆ ಎಂದು ಹುಸಿ ನುಡಿಯುತ್ತಿದೆ. ನಿಜಕ್ಕೂ ದೇಶದಲ್ಲಿ ಮೂಲಸೌಕರ್ಯ ಸೇರಿ ಎಲ್ಲವನ್ನೂ ನೀಡಿದ್ದು ಕಾಂಗ್ರೆಸ್ ಎಂದು ಅವರು ಹೇಳಿದರು.
ವಿಧಾನಪರಿಷತ್ ಸದಸ್ಯ ಧರ್ಮಸೇನ ಮಾತನಾಡಿ, ‘ಕಾಂಗ್ರೆಸ್ ಈ ಬಾರಿ 52 ಭರವಸೆಗಳನ್ನು ನೀಡಿದೆ. ಎಲ್ಲ ಭರವಸೆಗಳನ್ನೂ ಈಡೇರಿಸುವ ಆಶ್ವಾಸನೆ ನೀಡಿದೆ’ ಎಂದರು.
ಬಡವರ ವ್ಯಕ್ತಿ ಗೌರವ ಕಾಪಾಡಲು ಮಾಸಿಕ ₹ 6 ಸಾವಿರ ಹಣ ನೀಡುವ ನ್ಯಾಯ್ ಯೋಜನೆ, 34 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ, ಸಾರ್ವತ್ರಿಕ ಆರೋಗ್ಯ ಸೇವೆ ಸೇರಿದಂತೆ ಅನೇಕ ಭರವಸೆ ನೀಡಲಾಗಿದೆ. ಈ ಎಲ್ಲ ಭರವಸೆಗಳನ್ನು ಈಡೇರಿಸುವ ಬದ್ಧತೆಯನ್ನು ರಾಹುಲ್ ಗಾಂಧಿ ವ್ಯಕ್ತಪಡಿಸಿದ್ದಾರೆ ಎಂದರು.
ಇದಕ್ಕೂ ಮುನ್ನ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.
ಪಕ್ಷದ ಎಐಸಿಸಿ ವಕ್ತಾರರಾದ ಐಶ್ವರ್ಯ, ಗ್ರಾಮಾಂತರ (ಜಿಲ್ಲಾ) ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ವೆಂಕಟೇಶ್, ಲಕ್ಷಣ್, ಶಿವಣ್ಣ, ಮಂಜುಳಾ ಮಾನಸ ಇದ್ದರು.