ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪಿಎಸ್ಐ ನೇಮಕಾತಿ ಹಗರಣದ ತನಿಖೆ ನಡೆಯುತ್ತಿದ್ದು, ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಖಚಿತ. ಅದರಲ್ಲಿ ಅವರು, ಇವರು ಅಂಥ ಏನೂ ಇಲ್ಲ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲೂ ಹಲವು ಹಗರಣಗಳು ನಡೆದಿದ್ದವು. ಭ್ರಷ್ಟ ಕಾಂಗ್ರೆಸ್ ಸರ್ಕಾರವು ಅಕ್ರಮದ ತನಿಖೆ ಮಾಡಿಸಿರಲಿಲ್ಲ. ಅವರದ್ದು ಭ್ರಷ್ಟಾಚಾರದ ಸಂಸ್ಕೃತಿ. ಈ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ’ ಎಂದು ಪ್ರಶ್ನಿಸಿದರು.