ಮೈಸೂರು: ಇಲ್ಲಿನ ಟಿಪ್ಪು ವೃತ್ತದಲ್ಲಿ ಗಸ್ತಿನಲ್ಲಿದ್ದ ಎನ್.ಆರ್.ಠಾಣೆ ಇನ್ಸ್ಪೆಕ್ಟರ್ ಶೇಖರ್ ಅವರು ಐವರನ್ನು ಬಂಧಿಸಿ, ಅವರಿಂದ 504 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಮದನ್, ಸೈಯ್ಯದ್ ರಿಹಾನ್, ತಬ್ರೀಸ್, ಮಹಮ್ಮದ್ ಅಶ್ರಫ್, ಮಹಮ್ಮದ್ ಅಲಿ ಬಂಧಿತರು.
ಇವರು ಆಟೊದಲ್ಲಿ ಪ್ಲಾಸ್ಟಿಕ್ ಕವರ್ ಒಳಗೆ ಗಾಂಜಾ ಪೊಟ್ಟಣಗಳನ್ನು ಇಟ್ಟುಕೊಂಡಿದ್ದರು. ಪೊಲೀಸರು ಬರುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದ ಇವರನ್ನು ಹಿಡಿದು ತಪಾಸಣೆ ನಡೆಸಿದಾಗ ಗಾಂಜಾ ಪೊಟ್ಟಣಗಳು ಪತ್ತೆಯಾದವು ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರವಷ್ಟೇ ಮಂಡಿಮೊಹಲ್ಲಾದ ಎಂಕೆಡಿಕೆ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿ ಜುಬೇರ್ಖಾನ್ (22) ಎಂಬಾತನನ್ನು ಮಂಡಿ ಪೊಲೀಸರು ಬಂಧಿಸಿದ್ದರೆ, ಗುರುವಾರ ರಾಜೀವ್ನಗರದ 1ನೇ ಹಂತದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಅಬ್ದುಲ್ ರಜೀಕ್ ಮತ್ತು ಅಮ್ಮುಖಾನ್ ಎಂಬುವರನ್ನು ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದರು.