ಮೈಸೂರು ಮಹಾನಗರ ಪಾಲಿಕೆ: ಶಿಲ್ಪಾ ನಾಗ್ಗೆ ಬೆಂಬಲ; ಡಿಸಿ ವರ್ಗಾವಣೆಗೆ ಪಟ್ಟು

ಮೈಸೂರು: ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ಅವರ ರಾಜೀನಾಮೆ ಅಂಗೀಕರಿಸಬಾರದು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆ ಸದಸ್ಯರು, ನೌಕರರು ಮತ್ತು ಪೌರ ಕಾರ್ಮಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಎಲ್ಲರೂ ಏಕಕಾಲದಲ್ಲಿ ಧರಣಿ ಕುಳಿತ ಕಾರಣ ಪಾಲಿಕೆ ಆವರಣ ಪ್ರತಿಭಟನಾ ತಾಣವಾಗಿ ಬದಲಾಯಿತು. ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
‘ನನ್ನ ಬೆಂಬಲ ಶಿಲ್ಪಾ ನಾಗ್ ಅವರಿಗೆ, ರೋಹಿಣಿ ಸಿಂಧೂರಿ ವರ್ಗಾವಣೆಯಾಗಲಿ’ ಎಂಬ ಭಿತ್ತಿಪತ್ರಗಳನ್ನು ಹಿಡಿದುಕೊಂಡಿದ್ದರು. ‘ತೊಲಗಲಿ ತೊಲಗಲಿ ಜಿಲ್ಲಾಧಿಕಾರಿ ತೊಲಗಲಿ, ಉಳಿಸಿ ಉಳಿಸಿ ಮೈಸೂರು ಉಳಿಸಿ’ ಎಂದು ಘೋಷಣೆ ಕೂಗಿದರು. ‘ಐ ಸ್ಟ್ಯಾಂಡ್ ವಿದ್ ಅವರ್ ಕಮಿಷನರ್’ ಎಂದು ಬರೆದಿದ್ದ ಬ್ಯಾನರ್ ಕಟ್ಟಲಾಗಿತ್ತು.
ಇದನ್ನೂ ಓದಿ: ಶಿಲ್ಪಾನಾಗ್ ನನಗೆ ರಾಜೀನಾಮೆ ಸಲ್ಲಿಸಿಲ್ಲ: ಮುಖ್ಯ ಕಾರ್ಯದರ್ಶಿ ರವಿಕುಮಾರ್
ಪಾಲಿಕೆ ಆಯುಕ್ತರ ಹುದ್ದೆ ಹಾಗೂ ಐಎಎಸ್ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಶಿಲ್ಪಾ ನಾಗ್ ಗುರುವಾರ ಪ್ರಕಟಿಸಿದ್ದರು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನಿರಂತರ ಕಿರುಕುಳದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಪಾಲಿಕೆ ಸದಸ್ಯರು ಹಂಗಾಮಿ ಮೇಯರ್ ಅನ್ವರ್ ಬೇಗ್ ನೇತೃತ್ವದಲ್ಲಿ ಸಭೆ ನಡೆಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದರು.
ಶುಕ್ರವಾರ ಬೆಳಿಗ್ಗೆ ಪಾಲಿಕೆ ಆವರಣದಲ್ಲಿ ನೆರೆದ ಸದಸ್ಯರು ಅಯುಕ್ತರಿಗೆ ಬೆಂಬಲ ಸೂಚಿಸಿದರು. ಜಿಲ್ಲಾಧಿಕಾರಿ ಅವರನ್ನು ಮೈಸೂರು ಜಿಲ್ಲೆಯಿಂದ ವರ್ಗಾವಣೆ ಮಾಡಿ ಶಿಲ್ಪಾ ನಾಗ್ ಅವರ ರಾಜೀನಾಮೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಅನ್ವರ್ ಬೇಗ್, ‘ಸರ್ವ ಪಕ್ಷಗಳ ಸಭೆ ಕರೆದು ಈ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೆವು. ಎಲ್ಲ ಸದಸ್ಯರು ಕೂಡಾ ಆಯುಕ್ತರ ಪರ ಇದ್ದೇವೆ. ಯಾವುದೇ ಕಾರಣಕ್ಕೂ ಅವರ ರಾಜೀನಾಮೆಯನ್ನು ಸರ್ಕಾರ ಅಂಗೀಕರಿಸಬಾರದು’ ಎಂದರು.
ಇದನ್ನೂ ಓದಿ: ₹12 ಕೋಟಿ ಸಿಎಸ್ಆರ್ ನಿಧಿ ಬಳಕೆ ಬಗ್ಗೆ ಪ್ರಶ್ನಿಸಿದ್ದೆ: ರೋಹಿಣಿ ಸಿಂಧೂರಿ
ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಮಧ್ಯಾಹ್ನ 2.30ರ ವೇಳೆಗೆ ಪಾಲಿಕೆ ಆವರಣಕ್ಕೆ ಬಂದು ಪ್ರತಿಭಟನಾನಿರತ ಸದಸ್ಯರ ಜತೆ ಮಾತುಕತೆ ನಡೆಸಿದರು.
‘ಎರಡು ದಿನಗಳ ಕಾಲಾವಕಾಶ ನೀಡಿ. ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ. ಧರಣಿ ಕೈಬಿಡಿ’ ಎಂದು ಮನವಿ ಮಾಡಿದರು. ಸಚಿವರ ಮನವಿಯಂತೆ ಸದಸ್ಯರು ಪ್ರತಿಭಟನೆ ಕೊನೆಗೊಳಿಸಿದರು.
‘ಸೋಮವಾರದ ವೇಳೆಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಅವರ ಮನವಿಯಂತೆ ಪ್ರತಿಭಟನೆ ವಾಪಸ್ ಪಡೆದಿದ್ದೇವೆ. ಸೋಮವಾರದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳುವೆವು’ ಎಂದು ಅಯೂಬ್ ಖಾನ್ ತಿಳಿಸಿದರು.
ಇದನ್ನೂ ಓದಿ: ಒಬ್ಬರ ಅಹಂನಿಂದ ವ್ಯವಸ್ಥೆ ಹದಗೆಡಬಾರದು: ಸಿಂಧೂರಿ ವಿರುದ್ಧ ಶಿಲ್ಪಾ ಮತ್ತೆ ಆಕ್ರೋಶ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.