ಮೈಸೂರು: ದಸರಾ ಮಹೋತ್ಸವದ ರೈತ ದಸರಾ ಅಂಗವಾಗಿ ಜೆ.ಕೆ.ಮೈದಾನದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ನಗರದ ಉದಯಗಿರಿಯ ಪ್ರಜ್ವಲ್ಕುಮಾರ್ 37.200 ಕೆ.ಜಿಯಷ್ಟು ಹಾಲು ಕರೆಯುವ ಮೂಲಕ ಪ್ರಥಮ ಬಹುಮಾನ (₹ 50 ಸಾವಿರ) ಪಡೆದುಕೊಂಡರು.
ಬೆಂಗಳೂರಿನ ಪಾದರಾಯನಪು ರದ ಸತೀಶಕುಮಾರ್ 37 ಕೆ.ಜಿಗೆ ಹಾಲು ಕರೆಯುವ ಮೂಲಕ ದ್ವಿತೀಯ (₹ 40 ಸಾವಿರ) ಬಹುಮಾನ ಪಡೆದುಕೊಂಡರು. ಬೆಂಗಳೂರಿನ ನಾಗರಭಾವಿಯ ವಿನಯಕುಮಾರ್ 32.750 ಕೆ.ಜಿ ಹಾಲು ಕರೆದು ತೃತೀಯ ಹಾಗೂ ಹರ್ಷಿತ್ ಗೌಡ 32.700 ಕೆ.ಜಿಯಷ್ಟು ಹಾಲು ಕರೆಯುವ ಮೂಲಕ 4ನೇ ಬಹುಮಾನ ಪಡೆದರು.
ಒಟ್ಟು 12 ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಮತ್ತು ಸಂಜೆ ಎರಡೂ ಅವಧಿಯಲ್ಲಿ ಹಾಲು ಕರೆಯಲಾಯಿತು. ಇವರಲ್ಲಿ ಮೈಸೂರಿನ 6 ಮಂದಿ ಬೆಂಗಳೂರಿನ 5 ಹಾಗೂ ಶ್ರೀರಂಗಪಟ್ಟಣದ ಒಬ್ಬರು ಮಾತ್ರ ಭಾಗವಹಿಸಿದ್ದರು. ಪಶುಸಂಗೋಪನೆ ಸಚಿವ ನಾಡಗೌಡ ಬಹುಮಾನ ವಿತರಿಸಿದರು.