ಮೈಸೂರು: ಇಲ್ಲಿ ನಡೆಯುತ್ತಿರುವ ಮಕ್ಕಳ ದಸರಾ ಮಹೋತ್ಸವವು ಮಂಗಳವಾರ ಸಮಾರೋಪಗೊಂಡಿತು. ಸಚಿವ ಸುರೇಶ್ಕುಮಾರ್ ಮಕ್ಕಳ ಪ್ರತಿಭೆ ಕಂಡು ಒಂದರೆ ಕ್ಷಣ ದಂಗಾದರು.
ಇಲ್ಲಿದ್ದ ಮಕ್ಕಳ ‘ವಿಜ್ಞಾನ ಮಾದರಿ ಪ್ರದರ್ಶನ’ ಮಳಿಗೆಗಳಿಗೆ ಭೇಟಿಕೊಟ್ಟ ಅವರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಮಕ್ಕಳೊಂದಿಗೆ ಕಳೆದರು.
ಪ್ರತಿ ಮಳಿಗೆಗೆ ಭೇಟಿ ನೀಡಿ ಪ್ರತಿ ಮಗುವಿನ ಮಾದರಿಯನ್ನು ಇದೇನಿದು ಎಂದು ಪ್ರಶ್ನಿಸಿ, ವಿವರಣೆ ಪಡೆದು ಖುಷಿಪಟ್ಟರು. ಇಂತಹ ಹೊಸತನದ ಅನ್ವೇಷಣೆಯನ್ನು ಮುಂದುವರಿಸಿಕೊಂಡು ಹೋಗುವಂತೆ ಕಿವಿಮಾತು ಹೇಳಿದರು.
ನಿವೇದಿತಾ ನಗರದಲ್ಲಿನ ‘ಕರುಣಾಮಯಿ’ ಶಾಲೆಯ ಅಂಗವಿಕಲ ಮತ್ತು ಬುದ್ಧಿಮಾಂದ್ಯ ಮಕ್ಕಳು ಪ್ರಸ್ತುತಪಡಿಸಿದ ‘ಗೋವಿನ ಹಾಡು’ ಹಾಡು ರೂಪಕ ಕಂಡು ಪ್ರೇಕ್ಷಕರು ಬೆರಗಾದರು. ಬುದ್ಧಿಮಾಂದ್ಯ ಮಕ್ಕಳ ಅಭಿನಯ ಮನಸೂರೆಗೊಂಡಿತು.
ನಂತರ ಮಾತನಾಡಿದ ಸಚಿವ ಸುರೇಶ್ಕುಮಾರ್, ‘ಈ ದಸರೆಗೆ ನಾನು ಬೆಳಿಗ್ಗೆಯೇ ಬರಬೇಕಿತ್ತು. ಮುಗಿಯುವ ಹಂತದಲ್ಲಿ ಬಂದಿದ್ದು, ನನಗಾದ ಬಹುದೊಡ್ಡ ನಷ್ಟ’ ಎಂದರು.
ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ, ಚಿಂತನೆ, ಯೋಚನಾ ಶಕ್ತಿಯನ್ನು ಬಿಡಬಾರದು. ಇದನ್ನು ನಿರಂತರವಾಗಿ ಬೆಳೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು. ನಂತರ, ಮಾವುತರ ಮಕ್ಕಳಿಂದ ನೃತ್ಯ ಪ್ರದರ್ಶನ ಜರುಗಿತು.