ಮೈಸೂರು: ಸರ್ಕಾರ ‘ಕರ್ನಾಟಕ ಈಡಿಗರ ಅಭಿವೃದ್ಧಿ ನಿಗಮ’ ಸ್ಥಾಪನೆ ಮಾಡಬೇಕು ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಎಂ.ಕೆ.ಪೋತರಾಜ್ ಒತ್ತಾಯಿಸಿದರು.
ರಾಜ್ಯದಲ್ಲಿ 4ನೇ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಈಡಿಗ ಜನಾಂಗವು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದಿದೆ. ಇದರಲ್ಲಿ ಸುಮಾರು 26 ಉಪಪಂಗಡಗಳೂ ಇವೆ. ಇವರ ಅಭಿವೃದ್ಧಿಗೆ ಕೂಡಲೇ ಸರ್ಕಾರ ಸ್ಪಂದಿಸಬೇಕು ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸೇಂದಿ ಹಾಗೂ ಸಾರಾಯಿ ವ್ಯಾಪಾರವನ್ನೇ ಜನಾಂಗದ ಬಹುತೇಕ ಮಂದಿ ಕುಲಕಸುಬನ್ನಾಗಿಸಿಕೊಂಡಿದ್ದರು. ಇದರ ನಿಷೇಧದಿಂದ ಇವರು ಆರ್ಥಿಕವಾಗಿ ಹಿಂದುಳಿಯುವಂತೆ ಮಾಡಿದೆ. ಇವರಿಗೆ ಈವರೆಗೂ ಯಾವುದೇ ಪುನವರ್ಸತಿ ಕಲ್ಪಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜನಾಂಗದ ಎಲ್ಲರ ಸರ್ವತೋಮುಖ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಆದಷ್ಟು ಶೀಘ್ರ ‘ಕರ್ನಾಟಕ ಈಡಿಗರ ಅಭಿವೃದ್ಧಿ ನಿಗಮ’ ಸ್ಥಾಪಿಸಿ, ಅದು ಕಾರ್ಯಪ್ರವೃತ್ತವಾಗುವಂತೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷರಾದ ರಾಜಶೇಖರ ಕದಂಬ, ವಿದ್ಯಾಸಾಗರ ಕದಂಬ, ಖಜಾಂಚಿ ಕೆ.ರಾಜು, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೃಷ್ಣಮೂರ್ತಿ, ಕಾರ್ಯದರ್ಶಿಗಳಾದ ಜಯಣ್ಣ, ಎಚ್.ಟಿ.ಗೋವಿಂದರಾಜು ಇದ್ದರು.