ಮೈಸೂರು: ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಕೆಪಿಎಸ್ಸಿ ಆಗಸ್ಟ್ 24ರಂದು ನಡೆಸಲು ಉದ್ದೇಶಿಸಿರುವುದು ಸರಿಯಲ್ಲ. ಕೂಡಲೇ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು ಆಗ್ರಹಿಸಿದರು.
ವೇದಿಕೆಯ ಜತೆಗೆ, ದಲಿತ ಸಂಘಟನೆಗಳ ಒಕ್ಕೂಟ, ದಲಿತ ವಿದ್ಯಾರ್ಥಿ ಒಕ್ಕೂಟ ಸೋಮವಾರ ಏರ್ಪಡಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೆಲವೇ ತಿಂಗಳುಗಳಲ್ಲಿ ನಿವೃತ್ತರಾಗುತ್ತಿರುವ ಕೆಪಿಎಸ್ಸಿ ಸದಸ್ಯರು, ಅಧಿಕಾರಿಗಳ ಹಿತಾಸಕ್ತಿಗಾಗಿ ಅಭ್ಯರ್ಥಿಗಳ ಪ್ರಾಣದ ಜತೆ ಚೆಲ್ಲಾಟವಾಡುವುದು ಸರಿಯಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಈ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ಹೋಲಿಕೆ ಮಾಡಲಾಗದು ಎಂದರು.
ಪ್ರಸಕ್ತ ಸಾಲಿನಲ್ಲಿ ಯಾವುದೇ ನೇಮಕಾತಿ ನಡೆಸದಂತೆ ಸರ್ಕಾರ ಹೊರಡಿಸಿದ ಸುತ್ತೋಲೆಯನ್ನು ಈ ಮೂಲಕ ಕೆಪಿಎಸ್ಸಿ ಗಾಳಿಗೆ ತೂರಿದೆ. ಪರೀಕ್ಷೆ ಬರೆಯುವವರ ಪೈಕಿ ಶೇ 20ರಷ್ಟು ಮಂದಿ ಕೊರೊನಾ ಕರ್ತವ್ಯದಲ್ಲಿ ನಿಯೋಜಿತರಾಗಿದ್ದಾರೆ. ಇವರಿಗೆ ಪರೀಕ್ಷೆ ಬರೆಯಲು ಸಮಾವಕಾಶವೇ ಸಿಗುವುದಿಲ್ಲ ಎಂದು ಹೇಳಿದರು.
ಇದರ ವಿರುದ್ಧ ಆಗಸ್ಟ್ 11ರಂದು ಬೆಳಿಗ್ಗೆ 11.30ಕ್ಕೆ ಪತ್ರ ಚಳವಳಿ ನಡೆಸಲಾಗುವುದು. ನಿರ್ಧಾರ ವಾಪಸ್ ಪಡೆಯದೇ ಹೋದರೆ ಕೆಪಿಎಸ್ಸಿ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.