ಮೈಸೂರು: ಇಲ್ಲಿನ ಎನ್ಟಿಎಂ ಶಾಲೆಯನ್ನು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರ ಮಾಡುವುದಕ್ಕೆ ತಡೆ ನೀಡಿ, ಶಾಲೆಯ ಜಾಗವನ್ನು ಹಾಗೆಯೇ ಉಳಿಸಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀಡಿರುವ ಮೌಖಿಕ ಆದೇಶ ನ್ಯಾಯಂಗ ನಿಂದನೆಯಾಗುತ್ತದೆ ಎಂದು ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಡಾ.ಸುಧಾಕರ ಹೊಸಳ್ಳಿ ತಿಳಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಈ ಕೂಡಲೇ ಆಶ್ರಮಕ್ಕೆ ನ್ಯಾಯಾಲಯದ ಆದೇಶದ ಅನುಸಾರ ಪೂರ್ಣ ಜಾಗ ಹಸ್ತಾಂತರಕ್ಕೆ ಲಿಖಿತ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ಸಮಿತಿಯ ನೇತೃತ್ವದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.
ವಿವೇಕಾನಂದರ ಸ್ಮಾರಕ, ಯುವಕರ ಕೌಶಲ್ಯ ಅಭಿವೃದ್ಧಿ ಮತ್ತು ಶ್ರದ್ದಾ ಕೇಂದ್ರದ ನಿರ್ಮಾಣಕ್ಕೆ ನಿರಂಜನ ಮಠ ಮತ್ತು ಎನ್ಟಿಎಂ ಶಾಲೆಯ ಆವರಣವನ್ನು ರಾಮಕೃಷ್ಣ ಆಶ್ರಮಕ್ಕೆ ನೀಡಬೇಕೆಂದು ಬಾಲ ನ್ಯಾಯಾಲಯ, ಬಾಲ ನ್ಯಾಯ ಮಂಡಳಿ, ಜಿಲ್ಲಾ ನ್ಯಾಯಾಲಯ ಹಾಗೂ ಹೈಕೋರ್ಟ್ ಆದೇಶ ನೀಡಿವೆ ಎಂದು ಅವರು ಹೇಳಿದ್ದಾರೆ.
ಒಂದು ವೇಳೆ ಇದಕ್ಕೆ ತಡೆ ಹಾಕಿದರೆ ಸಂವಿಧಾನದ 32ನೇ ವಿಧಿ ಅನ್ವಯ ಸಾಂವಿಧಾನಿಕ ಪರಿಹಾರ ಹಕ್ಕಿನ ಉಲ್ಲಂಘನೆಯಾಗುತ್ತದೆ. ನ್ಯಾಯಾಲಯದ ಆದೇಶಕ್ಕೆ ಅಪಮಾನ ಮಾಡುವುದು, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡುವ ಅಪಮಾನವೇ ಸರಿ. ಹಾಗಾಗಿ, ಈ ಕೂಡಲೇ ಆಶ್ರಮಕ್ಕೆ ಜಾಗ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸರ್ಕಾರ ಅಂಬೇಡ್ಕರ ಅವರ ವಿರುದ್ಧ, ನ್ಯಾಯಾಂಗದ ವಿರುದ್ಧ ನಿಲ್ಲುವುದಿಲ್ಲ ಎಂಬ ವಿಶ್ವಾಸವನ್ನು ಸಮಿತಿ ವ್ಯಕ್ತಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.