ಮಾಗಡಿ: ದೂರವಾಣಿ ಕೇಂದ್ರದ ಗುತ್ತಿಗೆ ನೌಕರನೊಬ್ಬ ಬಿಎಸ್ಎನ್ಎಲ್ ತಂತಿ ದುರಸ್ತಿಪಡಿಸುತ್ತಿದ್ದಾಗ ಅಲ್ಲೇ ಹಾದು ಹೋಗಿದ್ದ ತಂತಿಯಿಂದ ವಿದ್ಯುತ್ಪ್ರವಹರಿಸಿ ಮೃತಪಟ್ಟಿರುವ ಘಟನೆ ಕುದೂರಿನ ನವಗ್ರಾಮ ಬಡಾವಣೆಯಲ್ಲಿ ಗುರುವಾರ ನಡೆದಿದೆ.
ಮೃತ ನೌಕರರನ್ನು ರಾಮಯ್ಯ(42)ಎಂದು ಗುರುತಿಸಲಾಗಿದೆ. ಘಟನೆ ಖಂಡಿಸಿ ಮೃತರ ಕುಟುಂಬ ಸದಸ್ಯರು ಬಿಎಸ್ಎನ್ಎಲ್ ಕಚೇರಿ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದರು.
ಮಾಗಡಿ ದೂರವಾಣಿ ಕೇಂದ್ರದಲ್ಲಿ ಗುತ್ತಿಗೆ ನೌಕರನಾಗಿ ಮಣ್ಣು ಅಗೆಯುವ ಕೆಲಸ ಮಾಡುತ್ತಿದ್ದ ಜಗನ್ನಾಥಪುರದ ನಿವಾಸಿ ರಾಮಯ್ಯ ಕುದೂರಿನ ನವಗ್ರಾಮ ಬಡಾವಣೆಯಲ್ಲಿ ಮಣ್ಣಿನ ಕೆಲಸ ಮಾಡಲು ತೆರಳಿದ್ದರು. ದೂರವಾಣಿ ಕೇಂದ್ರದ ಲೈನ್ ಮೆನ್ ಕೆಲಸಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮರದ ಮೇಲೆ ಹಾದು ಹೋಗಿರುವ ದೂರವಾಣಿ ತಂತಿದುರಸ್ತಿ ಪಡಿಸುವಂತೆ ಸ್ಥಳದಲ್ಲಿದ್ದ ಸಿಬ್ಬಂದಿ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಅವಘಡ ನಡೆದಿದೆ.
ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಪತ್ನಿ ಅಥವಾ ಮಗನಿಗೆ ನೌಕರಿ ನೀಡಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.
ಬಿಎಸ್ಎನ್ಎಲ್ ಎ.ಜಿ.ಎಂ ಹ್ಯಾಂಡ್ರಿಗಲ್, ಡಿ.ಜಿ.ಎಂ ಗಾಯಿ, ಎಇ ಅರುಣಿ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮೃತರ ಸಂಬಂಧಿಗಳು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ಕುದೂರು ಪಿಎಸ್ಐ ವೆಂಕಟೇಶ್ ನಾಯ್ಕ್ ಹಾಗೂ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಿದರು.