ಪಿರಿಯಾಪಟ್ಟಣ/ಸರಗೂರು (ಮೈಸೂರು ಜಿಲ್ಲೆ): ಪಿರಿಯಾಪಟ್ಟಣ ಮತ್ತು ಸರಗೂರಿನಲ್ಲಿ ಕಾಡಾನೆಗಳ ದಾಳಿಗೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕಿನ ಆನೆಚೌಕೂರು ವಲಯದ ಗೋಣಿಕೊಪ್ಪ– ಹುಣಸೂರು ಮುಖ್ಯ ರಸ್ತೆಯ ಬದಿಯಲ್ಲಿ ವ್ಯಕ್ತಿಯೊಬ್ಬರನ್ನು ಗುರುವಾರ ತಡರಾತ್ರಿ ಆನೆಯೊಂದು ತುಳಿದು ಸಾಯಿಸಿದೆ. ಶುಕ್ರವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ. ಆದರೆ, ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಸರಗೂರಿನ ಕಬಿನಿ ಜಲಾಶಯದ ಎಡದಂಡೆ ನಾಲೆಯ ವರ್ಕಶಾಪ್ ಬಳಿ ಶುಕ್ರವಾರ ಬೆಳಿಗ್ಗೆ ವಾಯುವಿಹಾರಕ್ಕೆ ಹೊರಟಿದ್ದ ಲಕ್ಷ್ಮಮ್ಮ ಎಂಬುವವರ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಿ ಗಾಯಗೊಳಿಸಿದೆ.
ಸಲಗವು, ಲಕ್ಷ್ಮಮ್ಮ ಅವರನ್ನು ಸೊಂಡಿಲಿಂದ ತಳ್ಳಿದ್ದರಿಂದ ಅವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂಟಿ ಸಲಗವು ಸುತ್ತಲಿನ ಗ್ರಾಮಗಳಲ್ಲಿ ಮನಬಂದಂತೆ ಓಡಾಡುತ್ತಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಗೋಪಾಲಸ್ವಾಮಿ ಮತ್ತು ಕೃಷ್ಣ ಹೆಸರಿನ ಸಾಕಾನೆಗಳಿಂದ ಕಾಡಾನೆಯನ್ನು ಓಡಿಸಲು ಯತ್ನಿಸುತ್ತಿದ್ದಾರೆ. ಮಾಗುಡಿಲು, ಬೀಚನಹಳ್ಳಿ, ಆಗತ್ತೂರು, ಸಾಗರೆ ಗ್ರಾಮಗಳಿಗೆ ನುಗ್ಗಿ ಭೀತಿ ಸೃಷ್ಟಿಸಿರುವ ಈ ಆನೆಯು ಸದ್ಯ ಸರಗೂರಿನ ಯದುಗಿರಿ ಬಡಾವಣೆ ಪಕ್ಕದಲ್ಲಿ ಇರುವ ಗದ್ದೆಯಲ್ಲಿದೆ.
ಇದಕ್ಕೂ ಮುನ್ನ ಕಪಿಲಾ ನದಿಯಲ್ಲಿ ಆನೆಯು ಈಜುತ್ತಿದ್ದ ದೃಶ್ಯವನ್ನು ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಜನಜಂಗುಳಿಯಿಂದಾಗಿ ಆನೆ ಓಡಿಸುವ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಎಸಿಎಫ್ ಪರಮೇಶ್ ತಿಳಿಸಿದ್ದಾರೆ.