ಮೈಸೂರು: ರಾಯಚೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಬಂಧಿಸಿದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ಪ್ರತಿಭಟನಾಕಾರರು ರಾಯಚೂರು ಜಿಲ್ಲಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಂಘಟನೆಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ನಿಜಕ್ಕೂ ಇದೊಂದು ದುರದೃಷ್ಟಕರ ಘಟನೆ. ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಜೈಲಿಗೆ ತಳ್ಳುವ ಮೂಲಕ ಆಳುವ ಸರ್ಕಾರಗಳು ರೈತರನ್ನು ಹತ್ತಿಕ್ಕುತ್ತಿವೆ’ ಎಂದು ಕಿಡಿಕಾರಿದರು.
ರಾಯಚೂರು ರೈತರನ್ನು ಬಂಧಿಸಿದ ಅಲ್ಲಿನ ಜಿಲ್ಲಾಧಿಕಾರಿ ಅವರ ಕ್ರಮ ಸರಿಯಲ್ಲ. ಸರ್ಕಾರ ಕೂಡಲೇ ಅವರನ್ನು ಬೇರೆಡೆ ವರ್ಗ ಮಾಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಅಶ್ವಥ ನಾರಾಯಣರಾಜೇ ಅರಸ್, ಲೋಕೇಶ್ವರರಾಜೇಅರಸ್, ಹೊಸಕೋಟೆ ಬಸವರಾಜು, ಮರಂಕಯ್ಯ, ಮಹೇಶ್, ಚಂದ್ರೇಗೌಡ ಹಾಗೂ ಇತರರು ಇದ್ದರು.