ಮೈಸೂರು: ನಗರ ಪೊಲೀಸರು ಆರಂಭಿಸಿರುವ ‘ಆಪರೇಷನ್ ಫಾಸ್ಟ್ಟ್ರಾಕ್’ ಕಾರ್ಯಾಚರಣೆ ಮತ್ತೊಮ್ಮೆ ಫಲಿಸಿದೆ. ಇದರಿಂದ ಬೈಕ್ ಕಳ್ಳನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹುಣಸೂರಿನ ನೆಲ್ಲೂರು ಪಾಲ ಗ್ರಾಮದ ನಿವಾಸಿ ಪ್ರಸನ್ನ (24) ಬಂಧಿತ ಆರೋಪಿ. ಈತನಿಂದ ₹ 1.18 ಲಕ್ಷ ಮೌಲ್ಯದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶ್ರೀರಾಂಪುರದ 2ನೇ ಹಂತದ ಹುಣಸೇಮರದ ರಸ್ತೆಯಲ್ಲಿ ಅಶೋಕಪುರಂ ಠಾಣೆಯ ಪೊಲೀಸರು ‘ಆಪರೇಷನ್ ಫಾಸ್ಟ್ಟ್ರಾಕ್’ನಲ್ಲಿ ತೊಡಗಿದ್ದಾಗ ದ್ವಿಚಕ್ರ ವಾಹನದಲ್ಲಿ ಅನುಮಾನಾಸ್ಪದವಾಗಿ ಬರುತ್ತಿದ್ದ ಆರೋಪಿಯನ್ನು ಹಿಡಿಯಲು ಯತ್ನಿಸಿದರು.
ಆರೋಪಿಯು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸುತ್ತುವರೆದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದುದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ₹ 1.18 ಲಕ್ಷ ಮೌಲ್ಯದ 2 ದ್ವಿಚಕ್ರ ವಾಹನಗಳು ಹಾಗೂ 3 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃಷ್ಣರಾಜ ಉಪವಿಭಾಗದ ಎಸಿಪಿ ಗೋಪಾಲಕೃಷ್ಣ ಟಿ.ನಾಯಕ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಅನಂತಪದ್ಮನಾಭ ಹಾಗೂ ಸಿಬ್ಬಂದಿಯಾದ ಮಹದೇವಯ್ಯ, ಆನಂದ್, ರಾಘವೇಂದ್ರ, ಗಿರೀಶ್, ಶಿವಪ್ರಕಾಶ್, ರಾಜು ಹಾಗೂ ಜಗದೀಶ್ ಕಾರ್ಯಾಚರಣೆ ನಡೆಸಿದ್ದರು.
ಮೇ 2ರಂದು ನಡೆದಿದ್ದ ಸರಣಿ ಸರಗಳ್ಳತನ ಬಳಿಕ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ‘ಆಪರೇಷನ್ ಫಾಸ್ಟ್ಟ್ರಾಕ್’ ಎಂಬ ಕಾರ್ಯಾಚರಣೆ ರೂಪಿಸಿದ್ದರು. ಬೆಳಿಗ್ಗೆ ಮತ್ತು ಸಂಜೆ ನಗರದ ಆಯಟ್ಟಿನ ಸ್ಥಳಗಳಲ್ಲಿ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿಕೊಂಡು ಹೊಂಚು ಹಾಕಿ, ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದರು. ಇದರಿಂದ ಹಲವು ಮಂದಿ ಕಳ್ಳರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು.