ಬೆಂಗಳೂರು: ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವ್ಯಾಪ್ತಿಯಲ್ಲಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ‘ಸಮಗ್ರ ಶಿಕ್ಷಣ’ ಯೋಜನೆಗಾಗಿ ಲಾಂಛನ ರೂಪಿಸುವ ಸ್ಪರ್ಧೆ ಹಮ್ಮಿಕೊಂಡಿದೆ.
‘ಎಲ್ಲರಿಗೂ ಶಿಕ್ಷಣ, ಉತ್ತಮ ಶಿಕ್ಷಣ’ ಒದಗಿಸುವ ಗುರಿಹೊಂದಿರುವ ಇಲಾಖೆ ‘ಸಮಗ್ರ ಶಿಕ್ಷಣ’ ಯೋಜನೆ ಜಾರಿಗೊಳಿಸಿದೆ. ಪೂರ್ವ ಪ್ರಾಥಮಿಕ ಶಿಕ್ಷಣದಿಂದ ದ್ವಿತೀಯ ಪಿಯುವರೆಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದು ಈ ಯೋಜನೆಯ ಉದ್ದೇಶ.
ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಅಭಿಯಾನ ಮತ್ತು ಶಿಕ್ಷಕರ ಶಿಕ್ಷಣ ಈ ಮೂರೂ ಯೋಜನೆಗಳನ್ನೂ ಇದು ಒಳಗೊಂಡಿದೆ. ಶಿಕ್ಷಕರು ಮತ್ತು ತಂತ್ರಜ್ಞಾನವನ್ನು ಸಂಯೋಜಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಬಗ್ಗೆ ಈ ಯೋಜನೆ ಕೇಂದ್ರಿಕೃತವಾಗಿದೆ.
ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾರಂಭಿಸಲಾಗಿರುವ ಈ ಯೋಜನೆಗೆ ಸಮರ್ಪಕವಾದ ಲಾಂಛನ ರೂಪಿಸಲು ಇಲಾಖೆ ಈ ಸ್ಪರ್ಧೆ ಹಮ್ಮಿಕೊಂಡಿದೆ.
ಇಲ್ಲಿಯವರೆಗೆ 164 ಮಂದಿ ತಾವು ರೂಪಿಸಿರುವ ಲಾಂಛನಗಳನ್ನು ಸಲ್ಲಿಸಿದ್ದಾರೆ. ಜೂನ್ 23 ಕೊನೆಯ ದಿನವಾಗಿದ್ದು, ಹೆಚ್ಚು ಜನ ಇದರಲ್ಲಿ ಭಾಗವಹಿಸಬಹುದು. ಲಾಂಛನದೊಂದಿಗೆ ಅದನ್ನು ವಿವರಿಸುವ ಪುಟ್ಟ ಬರಹವೂ ಇರಬೇಕು. ಒಬ್ಬರು ಒಂದು ಲಾಂಛನವನ್ನು ಮಾತ್ರ ಸಲ್ಲಿಸಬಹುದು.
ಆಯ್ಕೆಯಾದ ಲಾಂಛನಕ್ಕೆ ₹2 ಲಕ್ಷ ಬಹುಮಾನವಿದ್ದು, ಅದರ ಎಲ್ಲಾ ಹಕ್ಕುಸ್ವಾಮ್ಯ ಇಲಾಖೆಯದ್ದಾಗಿದೆ. ಹೆಚ್ಚಿನ ಮಾಹಿತಿಗೆ ://www.mygov.in/ ವೆಬ್ಸೈಟ್ ನೋಡಬಹುದು.