ಮೈಸೂರು: 'ನಗರದ ಚಾಮುಂಡಿಪುರನ ಸಪ್ತಗಿರಿ ಮೆಲೋಡೀಸ್ ಆರ್ಕೆಸ್ಟ್ರಾ ತಂಡದಿಂದ ಜೂನ್ 12ರಂದು ಸಂಜೆ 4ಕ್ಕೆ ನಂಜುಮಳಿಗೆಯ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಖ್ಯಾತ ಗಾಯಕರಾಗಿದ್ದ ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಜನ್ಮದಿನದ ಅಂಗವಾಗಿ 'ಗಾನಗಂಧರ್ವ' ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಎಂ.ವಿ. ಗೋವಿಂದರಾಜ್ ತಿಳಿಸಿದರು.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, 'ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ' ಎಂದರು.
'ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಮಾಜಸೇವಕರಾದ ರವಿ ಗೌಡ್ರು, ಕೆ.ರಘುರಾಂ ವಾಜಪೇಯಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಚಲನಚಿತ್ರ ನಿರ್ಮಾಪಕ ಎಸ್.ಎ. ಶ್ರೀನಿವಾಸ್, ವೈದ್ಯರಾದ ಡಾ.ಸುರೇಂದ್ರ, ಡಾ.ರೇಖಾ, ಡಾ. ರವೀಂದ್ರ ಕುಮಾರ್ ಭಾಗವಹಿಸಲಿದ್ದಾರೆ' ಎಂದು ಮಾಹಿತಿ ನೀಡಿದರು.
'ಹಲವು ದಶಕಗಳಿಂದ ಕಲಾ ಸೇವೆ ಮಾಡಿದ ಸಾಧಕರಾದ ಮಹಾಲಿಂಗು, ನಾಗರಾಜ್, ಬಾಲಕೃಷ್ಣ, ಜಯಲಕ್ಷ್ಮಿ ನಾಯ್ಡು, ಶಾಂತಮ್ಮ, ರಾಧಮ್ಮ, ಪಾರ್ಥಸಾರಥಿ, ವಾಸು, ಪಾರ್ವತಮ್ಮ ಹಾಗೂ ಶಾಂಭಮೂರ್ತಿ ಅವರನ್ನು ಸತ್ಕರಿಸಲಾಗುವುದು' ಎಂದರು.
'ಕೋವಿಡ್-19, ಲಾಕ್ಡೌನ್ ಮೊದಲಾದ ಕಾರಣದಿಂದಾಗಿ ಹವ್ಯಾಸಿ ಕಲಾವಿದರು ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ. ಈಗಲೂ ಕಾರ್ಯಕ್ರಮಗಳು, ಕೋವಿಡ್ ಪೂರ್ವದಲ್ಲಿದ್ದಂತೆ ಸಿಗುತ್ತಿಲ್ಲ' ಎಂದು ಪ್ರತಿಕ್ರಿಯಿಸಿದರು.
ಗಾಯಕರಾದ ಗೀತಾ, ಜಯಲಕ್ಷ್ಮಿ ನಾಯ್ಡು, ಬಸವಲಿಂಗಸ್ವಾಮಿ ಹಾಗೂ ನಿವೃತ್ತ ಎಂಜಿನಿಯರ್ ರಾಜೇಂದ್ರ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.