ಮೈಸೂರು: ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ಕೊಡಿ ಎಂದು ಯಾದವ ಸಂಘದ ಮುಖಂಡರು ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ಯಾದವ ಜನಸಂಖ್ಯೆ ರಾಜ್ಯದಲ್ಲಿ 40 ಲಕ್ಷವಿದೆ. ಈ ಸಮುದಾಯವನ್ನು ಪ್ರತಿನಿಧಿಸುವ ಶಾಸಕಿಗೆ ಸಚಿವ ಸಂಪುಟದಲ್ಲಿ ಅವಕಾಶ ಕೊಡಬೇಕು’ ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.
ಸಮಾಜದ ಮುಖಂಡರಾದ ನಾಗೇಶ್ ಯಾದವ್, ಗಣೇಶ್ ಯಾದವ್, ಯೋಗೇಶ್, ಮೋಹನ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಬೈಸಾಸ್ ಅಪ್ಲಿಕೇಶನ್ ಬಿಡುಗಡೆ
ಮೈಸೂರು: ಷೇರು ಮಾರುಕಟ್ಟೆ ಆಧಾರಿತ ಕೌಶಲ ಹೊಂದಿದ ಆಟಗಳನ್ನಾಡಲು ಕಿಶೋರ್ ಮೋಹನ್ ಕುಮಾರ್ ಅಭಿವೃದ್ಧಿ ಪಡಿಸಿರುವ ಬೈಸಾಸ್ ಮೊಬೈಲ್ ಅಪ್ಲಿಕೇಶನ್ ಅನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಸೋಮವಾರ ಬಿಡುಗಡೆಗೊಳಿಸಿದರು.
ನೋಂದಣಿ ಶುಲ್ಕ ಪಾವತಿಸಿ, ಆಟಕ್ಕೆ ಪ್ರವೇಶಿಸಬಹುದು. ಬಹುಮಾನ ಕೊಡಲಾಗುತ್ತದೆ. ಇದು ಆನ್ಲೈನ್ ಜೂಜಲ್ಲ. ಕೌಶಲ ವೃದ್ಧಿಸಿಕೊಳ್ಳುವ ಆಟ ಎಂದು ಕಿಶೋರ್ ಪ್ರಶ್ನೆಯೊಂದಕ್ಕೆ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದರು.
ಸೆ.4ಕ್ಕೆ ಪ್ರತಿಭಟನೆ
ಮೈಸೂರು: ನಂಜನಗೂಡು ತಾಲ್ಲೂಕಿನ ಮಾದನಹಳ್ಳಿ ಗ್ರಾಮದಲ್ಲಿ ಬಡವರ ನಿವೇಶನಕ್ಕಾಗಿ ಮೀಸಲಿಟ್ಟಿರುವ ಜಾಗವನ್ನು ಪ್ರಭಾವಿಯೊಬ್ಬರು ಅತಿಕ್ರಮಣ ಮಾಡಿಕೊಂಡಿರುವುದನ್ನು ಖಂಡಿಸಿ, ಸೆ.4ರಂದು ಮುಖ್ಯಮಂತ್ರಿ ನಿವಾಸದ ಮುಂಭಾಗ ಪ್ರತಿಭಟಿಸಲಾಗುವುದು ಎಂದು ಗಿರೀಶ್ ಮಾದನಹಳ್ಳಿ ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಸ್ಥಳೀಯ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಒದಗಿಸದಿರುವುದರಿಂದ ಮುಖ್ಯಮಂತ್ರಿ ನಿವಾಸದ ಮುಂಭಾಗ ಪ್ರತಿಭಟಿಸುವೆ ಎಂದು ಹೇಳಿದರು.