ನಂಜನಗೂಡು: ತಾಲ್ಲೂಕಿನ ಗೋಣಹಳ್ಳಿ ಗ್ರಾಮದ ಆದಿಶಕ್ತಿ ಮಾರಮ್ಮ ರಥೋತ್ಸವವು ಸೋಮವಾರ ಸಾವಿರಾರು ಭಕ್ತರ ಹರ್ಷೋದ್ಘಾರಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವದ ಪ್ರಯುಕ್ತ ಗ್ರಾಮದ ದೇವಾಲಯದಲ್ಲಿ ಆದಿಶಕ್ತಿ ದೇವಿಗೆ ವಿಶೇಷ ಅಲಂಕಾರ, ಪೂಜೆಗಳನ್ನು ನೆರವೇರಿಸಲಾಯಿತು. ಆದಿಶಕ್ತಿಯ ಉತ್ಸವಮೂರ್ತಿಯನ್ನು ರಥದಲ್ಲಿ ಇರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥೋತ್ಸವ ನಡೆಸಲಾಯಿತು.
ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಭಕ್ತರು ದೇವಿಗೆ ಹಣ್ಣು-ಧವನ ಅರ್ಪಿಸಿ, ಪೂಜೆ ನೀಡಿ ತಮ್ಮ ಕೋರಿಕೆಗಳನ್ನು ಈಡೇರಿಸುವಂತೆ ಪಾರ್ಥನೆ ಸಲ್ಲಿಸಿದರು. ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ಭಕ್ತಿ ಭಾವದಿಂದ, ಹರ್ಷೋದ್ಗಾರ ಮಾಡುತ್ತಾ, ರಥವನ್ನು ಎಳೆದರು.
ದೇವಾಲಯದ ಆವರಣದಲ್ಲಿ ನಗರ್ಲೆ ಗ್ರಾಮದ ಆದಿಶಕ್ತಿ ಭಕ್ತಮಂಡಳಿಯವರು ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಿದ್ದರು. ಸಿ.ಪಿ.ಐ. ಶೇಖರ್, ಬಿಳಿಗೆರೆ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಯಶವಂತ ಕುಮಾರ್, ಸಂಚಾರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಜಯಲಕ್ಷ್ಮಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ರಥೋತ್ಸವದಲ್ಲಿ ಮುಖಂಡರಾದ ಎಸ್.ಸಿ.ಬಸವರಾಜು, ಗ್ರಾ.ಪಂ ಅಧ್ಯಕ್ಷ ಕುಮಾರಸ್ವಾಮಿ, ನಗರ್ಲೆ ಸರ್ವೇಶ, ಕೃಷ್ಣನಾಯಕ, ಭದ್ರನಾಯಕ, ರಂಗಸ್ವಾಮಿನಾಯಕ, ಮಹದೇವಸ್ವಾಮಿ, ಪ್ರಮೋದ, ನಿಂಗಣ್ಣ, ಸುರೇಶ್, ಸ್ವಾಮಿ, ಮಾರನಾಯಕ ಇದ್ದರು.