ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ದಿನಸಿ, ಹಾಲು ಹಾಗೂ ಔಷಧ ಹೊರತುಪಡಿಸಿ ಉಳಿದೆಲ್ಲಾ ಬಗೆಯ ಅಂಗಡಿಗಳು ಬಂದ್ ಆಗಿದ್ದವು.
ಸದಾ ಜನರಿಂದ ಗಿಜಿಗುಡುತ್ತಿದ್ದ ದೇವರಾಜ ಮಾರುಕಟ್ಟೆಯಲ್ಲಿ ಹಣ್ಣು ಮತ್ತು ತರಕಾರಿ ವ್ಯಾಪಾರವಷ್ಟೇ ನಡೆದಿತ್ತು.
ಬಸ್ ನಿಲ್ದಾಣದಲ್ಲಿ ಬಿಕೊ ಎನ್ನುವ ವಾತಾವರಣ ಇತ್ತು. ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಅಶೋಕರಸ್ತೆ, ಕೆ.ಆರ್.ವೃತ್ತ, ಜಯಚಾಮರಾಜ ಒಡೆಯರ್ (ಹಾರ್ಡಿಂಜ್)ವೃತ್ತ, ಚಾಮರಾಜೇಂದ್ರ ವೃತ್ತ ಸೇರಿದಂತೆ ಹಲವೆಡೆ ವಾಹನ ಸಂಚಾರ ಇರಲಿಲ್ಲ.
ದೇವರಾಜ ಮಾರುಕಟ್ಟೆ ಹಿಂಭಾಗದ ಮಟನ್ ಮಾರುಕಟ್ಟೆ ತೆರೆದಿತ್ತಾದರೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ.
ಉಡುಪಿ ವರದಿ: ಲಾಕ್ಡೌನ್ನಿಂದಾಗಿ ಭಾನುವಾರ ಉಡುಪಿ ಕೂಡ ಸ್ತಬ್ಧವಾಗಿದೆ.ಶನಿವಾರ ರಾತ್ರಿ 7ರಿಂದ ಸೋಮವಾರ ಬೆಳಿಗ್ಗೆ 7ರವರೆಗೆ ಸಂಪೂರ್ಣ ಲಾಕ್ಡೌನ್ ಇರಲಿದೆ.
ಅಗತ್ಯ ವಸ್ತುಗಳ ಖರೀದಿ ಹೊರತುಪಡಿಸಿ ಇತರೆ ಚಟುವಟಿಕೆಗಳು ಬಂದ್ ಆಗಿದ್ದವು. ಮುಸ್ಲಿಮರು ಮನೆಯಲ್ಲಿಯೇ ಈದ್ ಪ್ರಾರ್ಥನೆ ಸಲ್ಲಿಸಿದರು. ಇಡೀ ನಗರ ಬಿಕೋ ಎನ್ನುತ್ತಿತ್ತು.