ಮೈಸೂರು: ಗ್ರಾಸ್ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕೆಸಿ ಮೂವ್ಮೆಂಟ್ (ಗ್ರಾಮ್) ಮತ್ತು ಆರಿಸ್ ಗ್ಲೋಬಲ್ ಸಹಕಾರದೊಂದಿಗೆ ಸುಗಮ್ಯ ಶಿಕ್ಷಾ ಕಾರ್ಯಕ್ರಮದ ಯೋಜನೆಯಡಿಯಲ್ಲಿ ಸರ್ಕಾರಿ ಪ್ರೌಢಶಾಲೆ ಮೇಟಗಳ್ಳಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಅತಿಥಿಯಾಗಿ ಭಾಗವಹಿಸಿದ್ದ ಮಾನಸ ಗಂಗೋತ್ರಿಯ ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಜಿ.ವೆಂಕಟೇಶ್ ಕುಮಾರ್, ವಿದ್ಯಾರ್ಥಿಗಳು ಜೀವನ ಕೌಶಲ ಅಳವಡಿಸಿಕೊಂಡು ಗುರಿ ತಲುಪ ಬೇಕು. ಪ್ರತಿ ವಿದ್ಯಾರ್ಥಿ ತನ್ನೊಂದಿಗೆ ತಾನು ಸ್ಪರ್ಧೆ ಮಾಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೇಟಗಳ್ಳಿಯ ಪಿಎಸ್ಐ ನಾಗರಾಜ್ ನಾಯ್ಕ್, ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆರಿಸಿಕೊಂಡು ಅದರಲ್ಲಿ ವಿದ್ಯಾಭ್ಯಾಸ ಮುಂದುವರಿಸಬೇಕು ಎಂದರು.
ಮೈಸೂರು ಗ್ರಾಮಾಂತರ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣ ವರು ವಿದ್ಯಾರ್ಥಿವೇತನದ ಚೆಕ್ ವಿತರಿಸಿದರು.
ಗ್ರಾಮ್ನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಬಸವರಾಜು ಆರ್., ಸುಗಮ್ಯ ಶಿಕ್ಷಾ ಕಾರ್ಯಕ್ರಮದ ಅಡಿಯಲ್ಲಿ ಇದುವರೆಗೆ ಸುಮಾರು 10 ಸಾವಿರ ವಿದ್ಯಾರ್ಥಿಗಳಿಗೆ ನೆರವು ನೀಡಲಾಗಿದೆ ಎಂದರು.
ಮೇಟಗಳ್ಳಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹತ್ತು ವಿದ್ಯಾರ್ಥಿಗಳಿಗೆ ₹ 5ಸಾವಿರದ ಚೆಕ್ ವಿತರಿಸಲಾಯಿತು.