ಬೆಂಗಳೂರು: ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ರಾಚೇನಹಳ್ಳಿ-ದಾಸರಹಳ್ಳಿ ಕೆರೆಅಂಗಳದಲ್ಲಿ ಇದೇ 4ರಂದು ‘ನಮ್ಮ ಬೆಂಗಳೂರು ಹಬ್ಬ’ ಹಾಗೂ ಕೆರೆಯ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 6 ಗಂಟೆಗೆ ಸಾರ್ವಜನಿಕರಿಂದ ಕೆರೆಯ ಸುತ್ತ 5 ಕಿ.ಮೀ. ಓಟ, ಸೈಕ್ಲೋಥಾನ್, ಆಹಾರ ಮಳಿಗೆಗಳು, ಕಲಾಪ್ರದರ್ಶನ, ಗ್ರಾಮೀಣ ಆಟಗಳು, ಲೇಸರ್ ಶೋ, ಜಲಕ್ರೀಡೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕ್ಷೇತ್ರ ವ್ಯಾಪ್ತಿಯ ಎಲ್ಲ ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದ್ದು, ರಾಚೇನಹಳ್ಳಿ-ದಾಸರಹಳ್ಳಿ ಕೆರೆಯನ್ನು ₹16 ಕೋಟಿ ವೆಚ್ಚದಲ್ಲಿ
ಅಭಿವೃದ್ಧಿಗೊಳಿಸಲಾಗಿದೆ. ಕೆರೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಹಾಗೂ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.