ಮೈಸೂರು: ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯಿಂದ ಪ್ರಚೋದನೆಗೊಂಡು ಶಿವಮೊಗ್ಗದಲ್ಲಿ ಕೊಲೆ ನಡೆದಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿರುವುದು ಸರಿಯಲ್ಲ. ಸರ್ಕಾರ ಅವರದ್ದೇ ಇರುವುದರಿಂದ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡ ಡಾ. ಎಚ್. ಸಿ. ಮಹದೇವಪ್ಪ ಒತ್ತಾಯಿಸಿದರು.
ಹತ್ಯೆಯಾದವರು ಹಿಂದೂ ಆಗಿದ್ದರೂ ಸರಿ, ಮುಸ್ಲಿಮ್ ಆಗಿದ್ದರೂ ಸರಿ ಅದು ಖಂಡನೀಯ. ಆದರೆ, ಆ ಕೊಲೆಯನ್ನು ಯಾರು ಮಾಡಿದ್ದಾರೋ ಅವರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಇಲ್ಲಿ ಸೋಮವಾರ ಸುದ್ದಿಗಾರರಿಗೆ ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಹೇಳುವವರು, ಕೇಳುವವರು ಯಾರೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅರಾಜಕತೆ ಕಡೆಗೆ ರಾಜ್ಯ ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈಶ್ವರಪ್ಪ ಅವರಿಗೆ ಮಾತ್ರವಲ್ಲ ಆರ್ಎಸ್ಎಸ್ ಹಿನ್ನೆಲೆ ಹೊಂದಿರುವ ಬಹುತೇಕರಿಗೆ ಸಂವಿಧಾನದ ಮೇಲಾಗಲಿ, ಪ್ರಜಾಪ್ರಭುತ್ವದ ಮೇಲಾಗಲಿ ಏನೇನೂ ಕಾಳಜಿ ಇಲ್ಲ ಎಂದು ಅವರು ಹೇಳಿದರು.
ರಾಷ್ಟ್ರಧ್ವಜವು ಭಾರತದ ವೈವಿಧ್ಯಮಯ ಬದುಕನ್ನು, ಸಾಂಸ್ಕೃತಿಕತೆಯನ್ನು ಪ್ರತಿಬಿಂಬಿಸುತ್ತದೆ. ಅದನ್ನು ಬದಲಿಸುವ ಚಿಂತನೆಯೇ ರಾಷ್ಟ್ರದ್ರೋಹದ ಚಿಂತನೆ ಎಂದು ಅವರು ತಿಳಿಸಿದರು.
ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿದ ಈಶ್ವರಪ್ಪ ಅವರಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ಅವರನ್ನು ರಾಜ್ಯಪಾಲರು ಸಂಪುಟದಿಂದ ವಜಾಗೊಳಿಸಿ, ವಿವರಣೆ ಪಡೆಯಬೇಕು ಜತೆಗೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.