ಮೈಸೂರು: ರಾಜ್ಯದ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಮತ್ತು ಜಲ ಸಂರಕ್ಷಣೆ ಉದ್ದೇಶದಿಂದ ಜೆಡಿಎಸ್ ಪಕ್ಷ ಹಮ್ಮಿಕೊಂಡಿರುವ ‘ಜನತಾ ಜಲಧಾರೆ’ ಯಾತ್ರೆಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶನಿವಾರ ಬೆಳಿಗ್ಗೆ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ಬಳಿ ಚಾಲನೆ ನೀಡಿದರು.
ಬೆಂಗಳೂರಿನಿಂದ ಹೆಲಿಕಾಪ್ಟರ್ ನಲ್ಲಿ ಎಚ್.ಡಿ.ಕೋಟೆಯ ಬೀಚನಹಳ್ಳಿಗೆ ಬಂದಿಳಿದ ಅವರು, ಸ್ಥಳೀಯ ಶಾಲೆಯ ಆವರಣದಲ್ಲಿ ಆಯೋಜಿಸಿದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು.
ಸಭೆಯಲ್ಲಿ ಮಾತನಾಡಿ, ' ಪಕ್ಷದ ಮುಖಂಡರು ಸೇರಿ ಅತ್ಯಂತ ಶ್ರೇಷ್ಠ ಕಾರ್ಯ ಕೈಗೊಂಡಿದ್ದಾರೆ. ಅದನ್ನು ಕಬಿನಿ ಜಲಾಶಯದಿಂದಲೇ ಪ್ರಾರಂಭ ಮಾಡಿದ್ದೇನೆ' ಎಂದರು.
'ನಮ್ಮ ರಾಜ್ಯದಲ್ಲಿ ಅನೇಕ ನದಿ, ಉಪನದಿಗಳು ಇವೆ. ದುರಂತ ಎಂದರೆ ನಮ್ಮ ಭೂಪ್ರದೇಶದಲ್ಲಿ ಲಭಿಸುವ ನೀರು ಸಂಗ್ರಹ ಮಾಡಿ ಕುಡಿಯಲು, ವ್ಯವಸಾಯಕ್ಕೆ ಬಳಸಲು ಶಕ್ತರಾಗಿಲ್ಲ. ರಾಜ್ಯದ 6.5 ಕೋಟಿ ಜನರ ಸಮಸ್ಯೆ ಬಗೆಹರಿಸುವುದು ನಮ್ನ ಉದ್ದೇಶ. ಈ ಕಾರ್ಯಕ್ರಮ ಎಚ್.ಡಿ.ಕುಮಾರಸ್ವಾಮಿ ಅವರ ಮೆದುಳಿನ ಕೂಸು' ಎಂದು ಹೇಳಿದರು.
ಬಳಿಕ ಕಬಿನಿ ಜಲಾಶಯದ ಮುಖ್ಯದ್ವಾರದ ಬಳಿ ತೆರಳಿದ ಅವರು ಪೂಜೆಯಲ್ಲಿ ಪಾಲ್ಗೊಂಡರು. ಕಬಿನಿ ನೀರನ್ನು ಜಲಧಾರೆ ವಾಹನದ ಕಳಶಕ್ಕೆ ಸುರಿದು ಯಾತ್ರೆಗೆ ಚಾಲನೆ ನೀಡಿದರು.
ಶಾಸಕ ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯರ ಸಿ.ಎನ್.ಮಂಜೇಗೌಡ, ಜೆಡಿಎಸ್ ವಕ್ತಾರ ಶರವಣ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡರು.
ಇಲ್ಲಿಂದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣಕ್ಕೆ ತೆರಳಲಿದ್ದು, ಕೆಆರ್ಎಸ್ನಲ್ಲೂ ಯಾತ್ರೆಗೆ ಚಾಲನೆ ನೀಡಲಿದ್ದಾರೆ.