ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸದಿಂದ ಮೈಸೂರಿನ ಸೌಂದರ್ಯ ಸವಿಯಿರಿ

ಹೆಲಿ ರೈಡ್‌ಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಚಾಲನೆ
Last Updated 29 ಸೆಪ್ಟೆಂಬರ್ 2019, 16:10 IST
ಅಕ್ಷರ ಗಾತ್ರ

ಮೈಸೂರು: ಪ್ರವಾಸಿಗರು ಹಾಗೂ ಸ್ಥಳೀಯರು ಮೈಸೂರಿನ ಸೌಂದರ್ಯವನ್ನು ಆಗಸದಿಂದ ನೋಡಿ ಕಣ್ತುಂಬಿಕೊಳ್ಳುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಚಾಮುಂಡಿಬೆಟ್ಟ ತಪ್ಪಲಿನ ಲಲಿತ ಮಹಲ್‌ ಹೆಲಿಪ್ಯಾಡ್‌ನಲ್ಲಿ ಆಯೋಜಿಸಿರುವ ‘ಹೆಲಿ ರೈಡ್‌’ಗೆ ಸಚಿವ ಸಿ.ಟಿ.ರವಿ ಶನಿವಾರ ಚಾಲನೆ ನೀಡಿದರು.

ಚಿಪ್‌ಸನ್‌ ಹಾಗೂ ತುಂಬಿ ಏವಿಯೇಷನ್‌ ಕಂಪನಿಗಳಿಗೆ ಸೇರಿದ ತಲಾ ಒಂದೊಂದು ಹೆಲಿಕಾಪ್ಟರ್‌ಗಳಿವೆ. ಪ್ರತಿ ಹೆಲಿಕಾಪ್ಟರ್‌ನಲ್ಲಿ ತಲಾ 6 ಮಂದಿ ಪ್ರಯಾಣಿಸಬಹುದು. ಬೆಳಿಗ್ಗೆ 10ರಿಂದ ಸಂಜೆ ಸೂರ್ಯಾಸ್ತದವರೆಗೂ ಹಾರಾಟ ನಡೆಸಲಿವೆ. 8 ನಿಮಿಷಗಳ ಪ್ರಯಾಣವಿದ್ದು, ಪ್ರತಿ ವ್ಯಕ್ತಿಗೆ ₹2,700 ಶುಲ್ಕ ನಿಗದಿಪಡಿಸಲಾಗಿದೆ. ಹೆಲಿಕಾಪ್ಟರ್‌ ಹಾರಲು ಹಾಗೂ ನಿಲುಗಡೆ ಮಾಡಲು ಎರಡು ನಿಮಿಷ ತೆಗೆದುಕೊಳ್ಳಲಿದ್ದು, ಉಳಿದ ಆರು ನಿಮಿಷಗಳವರೆಗೆ ಆಗಸದಲ್ಲಿ ಹಾರಾಟ ನಡೆಸಲಾಗುತ್ತದೆ. ಚಾಮುಂಡಿ ಬೆಟ್ಟವನ್ನು ಸುತ್ತಿಕೊಂಡು ಅರಮನೆ, ವಸ್ತುಪ್ರದರ್ಶನ ಭಾಗದಲ್ಲಿ ಹಾರಾಟ ನಡೆಸಿ ಲಲಿತ ಮಹಲ್‌ ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್‌ ಆಗಲಿದೆ.

ದಸರಾ ಮಹೋತ್ಸವದ ಪ್ರಯುಕ್ತ ಪ್ರವಾಸಿಗರು ಮೈಸೂರಿನ ಸೊಬಗನ್ನು ಆಗಸದಿಂದ ಸವಿಯಲು ಹೆಲಿ ರೈಡ್‌ ಆಯೋಜಿಸಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಿ.ಟಿ.ರವಿ ಸಲಹೆ ನೀಡಿದರು.

ಈ ಬಾರಿಯ ದಸರಾ ಮಹೋತ್ಸವವನ್ನು ವ್ಯವಸ್ಥಿತವಾಗಿ ನಡೆಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ದಸರಾ ಮಹೋತ್ಸವದ ಸಿದ್ಧತೆಯನ್ನು ಜಿಲ್ಲಾಡಳಿತ ನೋಡಿಕೊಳ್ಳುತ್ತದೆ. ನಾವು ಹೊರಗಡೆಯಿಂದ ಸಹಾಯ ಮಾಡುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು, ಈ ಭಾಗದ ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿ ದಸರಾ ಮಹೋತ್ಸವದ ಸಿದ್ಧತೆಯಲ್ಲಿ ತೊಡಗಿದ್ದಾರೆ. ನೆರೆ ಹಾವಳಿಯಿಂದಾಗಿ ಸರಳ ದಸರಾ ಅಥವಾ ಸಾಂಪ್ರದಾಯಿಕ ದಸರಾ ಆಚರಿಸುವ ಕುರಿತು ನಿರ್ಧರಿಸಲಾಗಿತ್ತು. ಅನಂತರ, ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನಿಸಲಾಯಿತು’ ಎಂದು ಸ್ಪಷ್ಟಪಡಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT