ಮೈಸೂರು: ‘ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಒಂದು ಜಾತಿ, ರಾಜಕೀಯ ಪಕ್ಷ ಹಾಗೂ ಸ್ವಾಮೀಜಿಗಳು ಬೆಂಬಲ ನೀಡುತ್ತಿರುವುದು ಬಸವಣ್ಣನನ್ನು ಅವಮಾನಿಸಿದಂತೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಅಭಿಪ್ರಾಯಪಟ್ಟರು.
‘ಸರಿಯಾದ ದಾರಿಯಲ್ಲಿರುವ ನಾಯಕರನ್ನು ಬೆಂಬಲಿಸಬೇಕು. ಆದರೆ, ಶಿವಕುಮಾರ್ ಅಂಥವರನ್ನು ಸಮಾಜ ಬಹಿಷ್ಕರಿಸಬೇಕು. ದಾಖಲೆಗಳಿಲ್ಲದೇ ಜಾರಿ ನಿರ್ದೇಶನಾಲಯ ಬಂಧಿಸುವುದಿಲ್ಲ. ಇಲ್ಲದಿದ್ದರೆ, ನ್ಯಾಯಾಲಯವು ಅಧಿಕಾರಿಗಳಿಗೆ ಛೀಮಾರಿ ಹಾಕುತ್ತದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂದು ಕೂಡ ಬಿ.ಎಸ್.ಯಡಿಯೂರಪ್ಪ ಅವರಿಗೆ ಒಂದು ಜಾತಿ, ಪಕ್ಷ ಹಾಗೂ ಸ್ವಾಮೀಜಿಗಳು ಬೆಂಬಲ ನೀಡಿದ್ದರು; ಇಂದು ಡಿ.ಕೆ.ಶಿವಕುಮಾರ್ ವಿಚಾರದಲ್ಲಿಯೂ ಹಾಗೇ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿರುವ ಭ್ರಷ್ಟರ ಬಗ್ಗೆಯೂ ತನಿಖೆ ನಡೆಸಬೇಕು, ಡಿ.ಕೆ.ಶಿವಕುಮಾರ್ ಅವರ ವಿರುದ್ಧದ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರಿಗಳ ವಿರುದ್ಧ ತನಿಖೆ ನಡೆಸುತ್ತಿರುವುದು ಸರಿಯಾಗಿಯೇ ಇದೆ. ಆದರೆ, ಅವರು ತಮ್ಮದೇ ಪಕ್ಷದ ಭ್ರಷ್ಟಾಚಾರಿಗಳ ವಿರುದ್ಧವೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈಚೆಗೆ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಸಿದ್ದಾರ್ಥ್ ಅವರ ಆತ್ಮಹತ್ಯೆ, ಅವರು ಷೇರುಪೇಟೆಯಲ್ಲಿ ನಡೆಸಿದ್ದಾರೆ ಎನ್ನಲಾದ ಬಹುಕೋಟಿ ರೂಪಾಯಿ ಮೌಲ್ಯದ ಡಾರ್ಕ್ ಫೈಬರ್ ಹಗರಣದ ಸಂಬಂಧವೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಆತ್ಮಹತ್ಯೆ ಮಾಡಿಕೊಂಡ ದಿನ ಅವರ ವ್ಯವಹಾರ ಕುರಿತು ಬಹಿರಂಗವಾದ ಪತ್ರದ ಬಗ್ಗೆಯೂ ತನಿಖೆ ನಡೆಯಬೇಕು. ಸಿದ್ದಾರ್ಥ ಅವರ ವ್ಯವಹಾರಕ್ಕೂ ಕಂಪನಿಗೂ ಸಂಬಂಧ ಇಲ್ಲ ಎನ್ನುವುದರ ಹಿಂದೆಯೇ ದೊಡ್ಡ ಸಂಚಿರುವ ಶಂಕೆ ವ್ಯಕ್ತಪಡಿಸಿದರು.