ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ನಿರ್ಮಿಸು ತ್ತಿರುವ ‘ಅಂಬೇಡ್ಕರ್ ಭವನ’ದ ಕಾಮಗಾರಿ ಆರು ವರ್ಷಗಳಾದರೂ ಪೂರ್ಣಗೊಂಡಿಲ್ಲ.
ಕಾಮಗಾರಿ ಆರಂಭವಾದ ಮೇಲೆ ಮೂರು ಸರ್ಕಾರಗಳು ಬದಲಾಗಿವೆ. ಆರಂಭದಲ್ಲಿ ₹ 14.6 ಕೋಟಿ ಇದ್ದ ಯೋಜನೆ 20.6 ಕೋಟಿ ತಲುಪಿ ಹೆಚ್ಚುವರಿ ಕಾಮಗಾರಿಗೆಂದು ಮತ್ತೆ ₹ 18 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ. ಕ್ರಿಯಾ ಯೋಜನೆ ಬದಲಾಗಿದ್ದು, ಹೆಚ್ಚುವರಿ ಕಾಮಗಾರಿಯ ಅನುದಾನಕ್ಕೆ ಇನ್ನೂ ಅನುಮೋದನೆ ಲಭಿಸಿಲ್ಲ.
ಮೊದಲ ಹಂತದ ಕಾಮಗಾರಿಯೇ ತೆವಳುತ್ತಾ ಸಾಗುತ್ತಿದ್ದು, ಉಳಿದ ಕೆಲಸ ಮುಗಿಯಲು ಇನ್ನೆಷ್ಟು ವರ್ಷ ಬೇಕು ಎಂಬುದು ಸಾರ್ವಜನಿಕರ ಪ್ರಶ್ನೆ.
ಸದ್ಯ ಗೋಪುರಕ್ಕೆ ಶೀಟ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಎರಡನೇ ಹಂತದಲ್ಲಿ ಒಳಾಂಗಣ ಸಭಾಂಗಣಕ್ಕೆ ಹವಾನಿಯಂತ್ರಣ ವ್ಯವಸ್ಥೆ, ವಿನ್ಯಾಸ, ಪೀಠೋಪಕರಣ, ಕುಷನ್ ಆಸನ, ಸಿ.ಸಿ.ಟಿ.ವಿ ಕ್ಯಾಮೆರಾ, ಬೆಳಕು ಮತ್ತು ಧ್ವನಿವರ್ಧಕ ಸೌಲಭ್ಯ ಹಾಗೂ ಬಹುಮಹಡಿ ವಾಹನ ನಿಲುಗಡೆ ವ್ಯವಸ್ಥೆಯೂ ಸೇರಿವೆ.
‘ಅನುದಾನ ಬಿಡುಗಡೆಯಾದ ಮೇಲಷ್ಟೇ ಟೆಂಡರ್ ಕರೆದು ಕೆಲಸ ಶುರು ಮಾಡಬೇಕು. ಹೀಗಾಗಿ, ಕಾಮಗಾರಿ ಮುಗಿಯುವ ಸಮಯವನ್ನು ಈಗಲೇ ನಿಗದಿ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸೂಪರಿಂಟೆಂಡೆಂಟ್ ಎಂಜಿನಿಯರ್ ಸುರೇಶ್ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.
ನಗರದ ದೇವರಾಜ ಮೊಹಲ್ಲಾದ ದೇವರಾಜ ಪೊಲೀಸ್ ಠಾಣೆ ಸಮೀಪ 7,470 ಚದರ ಮೀಟರ್ ವಿಸ್ತೀರ್ಣ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ರಾಜ್ಯದಲ್ಲೇ ದೊಡ್ಡ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ 2012ರ ಮೇ 4ರಂದು ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. ಅದೇ ವರ್ಷದ ಸೆಪ್ಟೆಂಬರ್ನಲ್ಲಿ ಕಾಮಗಾರಿ ಆರಂಭವಾಗಿತ್ತು. ಬೇಸ್ಮೆಂಟ್, ನೆಲ ಮಹಡಿ, ಮೊದಲ ಅಂತಸ್ತು ಹಾಗೂ ಎರಡನೇ ಮಹಡಿ ನಿರ್ಮಿಸಲು ಯೋಜನೆ ರೂಪಿಸಿ ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಅವಧಿ ನಿಗದಿಪಡಿಸಲಾಗಿತ್ತು.
ಎರಡನೇ ಹಂತದ ಕಾಮಗಾರಿಗೆಂದು ₹ 18 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿಯೇ ವರ್ಷ ಕಳೆದಿದೆ. ಹೀಗಾಗಿ, ಭವನ ನಿರ್ಮಾಣ ಪೂರ್ಣಗೊಳ್ಳಲು ಮತ್ತಷ್ಟು ಸಮಯ ಹಿಡಿಯುವ ಸಾಧ್ಯತೆ ಇದೆ.
₹ 14.6 ವೆಚ್ಚದಕ್ಕು ಯೋಜನೆ ರೂಪಿಸುವಾಗ ಬಯಲು ಸಭಾಂಗಣ ನಿರ್ಮಿಸಲು ನಿರ್ಧರಿಸಲಾಗಿತ್ತು. ಆದರೆ, ಸುತ್ತಮುತ್ತ ವಾಹನಗಳ ಓಡಾಟ ಶಬ್ದ, ವಾಯುಮಾಲಿನ್ಯದಿಂದ ಕಾರ್ಯಕ್ರಮ ಗಳಿಗೆ ಅಡಚಣೆ ಉಂಟಾಗಬಹುದು ಎಂಬ ಕಾರಣಕ್ಕೆ ಒಳಾಂಗಣ ಸಭಾಂ ಗಣ ನಿರ್ಮಿಸಲು ಜಿಲ್ಲಾಡಳಿತ ಮುಂದಾ ಯಿತು. ಹೀಗಾಗಿ, ಆ ಕಾಮಗಾರಿ ವೆಚ್ಚ ₹ 20.6 ಕೋಟಿ ತಲುಪಿತು.
‘ಭವನದ ರೂಪುರೇಷೆ ಬದಲಾಗಿದ್ದರಿಂದ ಮೊದಲ ಹಂತದ ಕಾಮಗಾರಿ ವಿಳಂಬವಾಗಿದೆ. ಕೆಲ ಕಾಮಗಾರಿಗಳು ಮೊದಲು ಸಿದ್ಧಪಡಿಸಿದ್ದ ಯೋಜನೆಯಲ್ಲಿ ಇರಲಿಲ್ಲ. ಗೋಪುರ ನಿರ್ಮಿಸಿ ಅದಕ್ಕೆ ಶೀಟ್ ಹಾಕುವ ಕಾಮಗಾರಿ ಕೈಗೆತ್ತಿಕೊಂಡೆವು’ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಈ ಭವನದ ಸಭಾಂಗಣದಲ್ಲಿ 2,500 ಆಸನ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಗ್ರಂಥಾಲಯ, ಸಂಶೋಧನಾ ಕೇಂದ್ರ, ಎರಡು ಗ್ರೀನ್ ರೂಂ, ವಿಶ್ರಾಂತಿ ಕೊಠಡಿ, ಶೌಚಾಲಯ, ಬೇಸ್ಮೆಂಟ್ನಲ್ಲಿ 150 ಕಾರು ಹಾಗೂ 350 ಬೈಕ್ ನಿಲುಗಡೆಗೆ ವ್ಯವಸ್ಥೆ ಒದಗಿಸಲು ಯೋಜನೆ ರೂಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.