ನಂಜನಗೂಡು: ತಾಲ್ಲೂಕಿನ ಮಡಹಳ್ಳಿ ಗ್ರಾಮದಲ್ಲಿ ಮಂಗಳವಾರ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಹಾಕಿದ ಪತಿ, ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಡಹಳ್ಳಿ ಗ್ರಾಮದ ಪುಟ್ಟಮಾದಪ್ಪ ಎಂಬುವರ ಮಗ ಶಾಂತಮೂರ್ತಿ (40), ತನ್ನ ಪತ್ನಿ ಪುಟ್ಟಮಣಿ(38)ಯನ್ನು ಕೊಲೆ ಮಾಡಿ, ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.
ತಿ.ನರಸೀಪುರ ತಾಲ್ಲೂಕಿನ ಕಿರಸಗೂರು ಗ್ರಾಮದ ಪುಟ್ಟಣ್ಣ ಎಂಬುವರ ಮಗಳು ಪುಟ್ಟಮಣಿಯನ್ನು 15 ವರ್ಷಗಳ ಹಿಂದೆ, ಮಡಹಳ್ಳಿಯ ಶಾಂತಮೂರ್ತಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಈ ದಂಪತಿಗೆ ಅಭಿ (12), ಪಲ್ಲವಿ (7) ಎಂಬ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.
ಮಂಗಳವಾರ ಸಂಜೆ ಪತ್ನಿಯನ್ನು ತನ್ನ ಜಮೀನಿಗೆ ಕರೆದೊಯ್ದ ಶಾಂತಮೂರ್ತಿ, ಆಕೆಯನ್ನು ಮಚ್ಚಿನಿಂದ ಕೊಚ್ಚಿದ್ದಾನೆ. ನಂತರ ಗ್ರಾಮದ ತನ್ನ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮದಲ್ಲಿ ನಡೆದ ಈ ಘಟನೆಯಿಂದ ಜನರು ಭಯಭೀತರಾಗಿದ್ದಾರೆ.
ಘಟನೆ ಸ್ಥಳಕ್ಕೆ ಡಿವೈಎಸ್ಪಿ ಪ್ರಭಾಕರ್ ರಾವ್ ಶಿಂದೆ, ಸಿಪಿಐ ಶೇಖರ್, ಬಿಳಿಗೆರೆ ಪೊಲೀಸ್ ಠಾಣೆಯ ಪಿಎಸ್ಐ ಯಶವಂತ್ ಕುಮಾರ್ ಭೇಟಿ ನೀಡಿ, ಮಹಜರು ನಡೆಸಿದ್ದಾರೆ.
‘ಘಟನೆಯಲ್ಲಿ ದಂಪತಿ ಮರಣ ಹೊಂದಿರುವುದರಿಂದ, ತನಿಖೆಯ ನಂತರ ಕೊಲೆಗೆ ಕಾರಣ ಏನು ಎಂಬುದು ತಿಳಿಯಲಿದೆ’ ಎಂದು ಡಿವೈಎಸ್ಪಿ ಪ್ರಭಾಕರ್ರಾವ್ ಶಿಂದೆ ಸುದ್ದಿಗಾರರಿಗೆ ತಿಳಿಸಿದರು.
ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು
ಪಿರಿಯಾಪಟ್ಟಣತಾಲ್ಲೂಕಿನ ಕಂಪಲಾಪುರ ಗ್ರಾಮದಲ್ಲಿ ಫೆ.10ರ ಸೋಮವಾರ ರಾತ್ರಿ ನಡೆದ ಗಲಾಟೆಯಲ್ಲಿ ಹಲ್ಲೆಗೊಳಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾರಾಯಣಮೂರ್ತಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.
ಕ್ಷುಲ್ಲಕ ವಿಚಾರಕ್ಕೆ ಕಂಪಲಾಪುರದ ರಾಜು ಎಂಬಾತ ಸಹೋದರರಾದ ಕಾಂತರಾಜ್, ನಾರಾಯಣ ಮೂರ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ವೇಳೆ ರಾಜು ಸಹೋದರ ಸಂತೋಷ್ ಎಂಬಾತ ಹಲ್ಲೆ ನಡೆಸಲು ಸಹಕಾರ ನೀಡಿದ್ದ.
ಕಾಂತರಾಜ್ ಸ್ಥಳದಲ್ಲೇ ಮೃತಪಟ್ಟಿದ್ದರು. ಹಲ್ಲೆಗೊಳಗಾಗಿದ್ದ ನಾರಾಯಣಮೂರ್ತಿ ಅವರನ್ನು ಚಿಕಿತ್ಸೆಗೆಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಪಿಗಳಾದ ರಾಜು, ಸಂತೋಷ್ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಾರಾಯಣಮೂರ್ತಿ ಮೃತಪಟ್ಟಿದ್ದರಿಂದ ಕಂಪಲಾಪುರದಲ್ಲಿ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.