ನವದೆಹಲಿ: ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಕಳೆದ ರಾತ್ರಿ ಸಾವಿರಾರು ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣದ ಸಂಬಂಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಬುಧವಾರ ದೂರು ಸಲ್ಲಿಸಿದೆ.
ಪಕ್ಷದ ಹಿರಿಯ ವಕ್ತಾರ ಆನಂದ ಶರ್ಮಾ ನೇತೃತ್ವದ ನಿಯೋಗದಿಂದ ದೂರು ಸಲ್ಲಿಕೆಯಾಗಿದ್ದು, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ.
‘ಆದಾಯ ತೆರಿಗೆ ಇಲಾಖೆಯನ್ನು ಆಡಳಿತ ರೂಢ ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕೇವಲ ಕಾಂಗ್ರೆಸ್ ಅಭ್ಯರ್ಥಿಗಳ ಮುಖಂಡರ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಲಾಗುತ್ತಿದೆ’ ಎಂದು ಆನಂದ ಶರ್ಮಾ ಆರೋಪಿಸಿದರು.
2019ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಪ್ರಧಾನಿಯಾಗುವ ಎಂದು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಪ್ರಧಾನಿ ಮೋದಿ ಬಂಗಾರಪೇಟೆಯಲ್ಲಿ ಮಾಡಿರುವ ಟೀಕೆಗೆ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ರಾಹುಲ್ ಗಾಂಧಿ ಇವರನ್ನು ಕೇಳಿ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿಲ್ಲ’ ಎಂದು ಆನಂದ ಶರ್ಮಾ ಹೇಳಿದರು. ಹಿರಿಯ ಮುಖಂಡರಾದ ಮೋತಿಲಾಲ್ ವೊಹ್ರಾ, ಅಮಿ ಯಾಜ್ನಿಕ್, ಪ್ರಮೋದ ತಿವಾರಿ ಹಾಜರಿದ್ದರು.