ಹುಣಸೂರು: ‘ವ್ಯಕ್ತಿಗಳ ಪ್ರಭಾವ ಹೆಚ್ಚಾಗಿ ಪಕ್ಷ ರಾಜಕಾರಣ ತೆರೆಮರೆಗೆ ಸರಿಯುತ್ತಿದೆ. ಅರಾಜಕತೆ, ರಾಜಕೀಯ ಅಸ್ಥಿರತೆಯಿಂದ ಸರ್ಕಾರವೇ ಪತನವಾಗುತ್ತದೆ. ಇದಕ್ಕೆ ಸಮ್ಮಿಶ್ರ ಸರ್ಕಾರ ಸ್ಪಷ್ಟ ಉದಾಹರಣೆ’ ಎಂದು ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್ ಲೇವಡಿ ಮಾಡಿದರು.
ನಗರದಲ್ಲಿ ‘ವಿಶ್ವಾಸಿಗಳ ಚಿಂತನಾ ಸಭೆ’ ಕಾರ್ಯಕ್ರಮದಲ್ಲಿ ಮಾತನಾಡಿ, ‘ರಾಜಕಾರಣದಿಂದ ದೂರ ಉಳಿಯುವ ಸಿದ್ಧತೆಯಲ್ಲಿದ್ದಾಗ ಮಾಜಿ ಶಾಸಕ, ದಿವಂಗತ ಚಿಕ್ಕಮಾದು ಮತ್ತು ಶಾಸಕ ಜಿ.ಟಿ.ದೇವೇಗೌಡ ಅವರು ರಾಜಕೀಯಕ್ಕೆ ಮತ್ತೊಮ್ಮೆ ಕರೆತಂದು ಮರು ಜೀವ ನೀಡಿದರು’ ಎಂದು ಸ್ಮರಿಸಿದರು.
‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನನ್ನನ್ನು ಎಲ್ಲಾ ವಿಷಯಗಳಿಂದ ದೂರ ಇಡುವ ವ್ಯವಸ್ಥಿತ ಸಂಚು ನಡೆಸಿದವು. ರಾಜ್ಯ ಘಟಕದ ಅಧ್ಯಕ್ಷನಾಗಿದ್ದರೂ ಸಮನ್ವಯ ಸಮಿತಿಯಿಂದ ದೂರ ಇಟ್ಟರು. ಈ ಎಲ್ಲಾ ಕುಚೇಷ್ಟೆಗೆ ಮೂಲ ಸೂತ್ರಧಾರ ಸಿದ್ದರಾಮಯ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರ್ಥಮಾಡಿಕೊಳ್ಳಿ: ಸಮ್ಮಿಶ್ರ ಸರ್ಕಾರ ಪತನಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರಣವಲ್ಲ, ಬದಲಿಗೆ ಎರಡೂ ಪಕ್ಷಗಳ ಮುಖಂಡರ ಸಾರ್ವಭೌಮತ್ವ, ಅಧಿಕಾರದ ಆಸೆ ಮೂಲ ಕಾರಣ. ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದರು’ ಎಂದು ಹೇಳಿದರು .
ಕಾರ್ಯಕ್ರಮವನ್ನು ಗಿರಿಜನ ದಂಪತಿ ವೀಣಾ ಮತ್ತು ಎಂ.ಬಿ.ಪ್ರಭು ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಎಲ್ಲಾ ಸಮಾಜದ ಮುಖಂಡರು ಹಾಜರಿದ್ದರು. ವಿಶ್ವನಾಥ್ ಮತದಾರರ ಪ್ರಶ್ನಾವಳಿಗೆ ಉತ್ತರಿಸಿ ಸ್ಪಷ್ಟನೆ ನೀಡುವ ಪ್ರಯತ್ನ ನಡೆಸಿದರು.