ಮೈಸೂರು: ಕಳೆದ ಸಾಲಿನಲ್ಲಿ ರಾಷ್ಟ್ರದಲ್ಲಿ ಫಸಲ್ ವಿಮಾ ಯೋಜನೆಯಡಿ ₹ 27 ಸಾವಿರ ಕೋಟಿಯಷ್ಟು ಹಣವನ್ನು ವಿಮಾ ಕಂತಾಗಿ ಕಂಪನಿಗಳು ತೆಗೆದುಕೊಂಡವು. ಆದರೆ, ವಿಮೆ ಪರಿಹಾರ ನೀಡಿದ್ದು ಕೇವಲ ₹ 7 ಸಾವಿರ ಕೋಟಿ ಮಾತ್ರ ಎಂದು ರಾಷ್ಟ್ರೀಯ ಕಿಸಾನ್ ಮಹಾಸಂಘದ ರಾಷ್ಟ್ರೀಯ ಸಂಘಟಕ ಶಿವಕುಮಾರ್ ಕಕ್ಕಾಜಿ ತಿಳಿಸಿದರು.
ಈ ಯೋಜನೆಯು ರೈತರಿಗಿಂತ ಹೆಚ್ಚಾಗಿ ವಿಮಾ ಕಂಪನಿಗಳಿಗೆ ಲಾಭ ತರುತ್ತವೆ ಎಂಬುದಕ್ಕೆ ಈ ಅಂಕಿಅಂಶಗಳಿಗಿಂತ ಹೆಚ್ಚಿನ ಉದಾಹರಣೆ ಬೇಕಿಲ್ಲ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಕಳೆದ 5 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ರೈತ ಸಂಘಟನೆಗಳು ಭೇಟಿಗಾಗಿ ಸಮಯ ಕೇಳಿದರೂ ಒಂದು ನಿಮಿಷವೂ ದೊರೆಯಲಿಲ್ಲ. ಆದರೆ, ಕಾರ್ಪೋರೇಟ್ ವಲಯದ ಉದ್ದಿಮೆದಾರರು ನಿತ್ಯ ಅವರನ್ನು ಭೇಟಿ ಮಾಡುತ್ತಾರೆ. ಕೇಂದ್ರ ಸರ್ಕಾರ ಕಾರ್ಪೋರೇಟ್ ವಲಯದ ಪರವಾಗಿದೆಯೇ ವಿನಹಾ ರೈತರ ಪರವಾಗಿಲ್ಲ ಎಂದರು.
ಕಳೆದ 9 ತಿಂಗಳಲ್ಲಿ 29 ಒಪ್ಪಂದಗಳನ್ನು ನರೇಂದ್ರ ಮೋದಿ ವಿದೇಶಗಳೊಂದಿಗೆ ಮಾಡಿಕೊಂಡಿದ್ದಾರೆ. ಇವೆಲ್ಲವೂ ರೈತ ವಿರೋಧಿಯಾಗಿರುವುದಕ್ಕೆ ಬಹಿರಂಗಪಡಿಸಿಲ್ಲ. ಇದೀಗ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್ಸಿಇಪಿ) ಒಪ್ಪಂದಕ್ಕೂ ಸಹಿ ಹಾಕಲು ಹೊರಟಿದೆ. ಒಂದು ವೇಳೆ ಇದಕ್ಕೆ ಸಹಿ ಹಾಕಿದರೆ ರೈತರ ವಿನಾಶ ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದರು.