ಮೈಸೂರು: ‘ಜಾತಿ ವಿನಾಶವಾಗಬೇಕಾದರೆ ಅಂತರ್ಜಾತಿ ವಿವಾಹಗಳು ಹೆಚ್ಚಾಗಿ ನಡೆಯಬೇಕು. ಪೋಷಕರು ತಮ್ಮ ಮಕ್ಕಳನ್ನು ಜಾತ್ಯತೀತವಾಗಿ ಬೆಳೆಸಬೇಕು’ ಎಂದು ಮೈಸೂರಿನ ವೈದ್ಯರಾದ ಡಾ.ರಂಗನಾಥಯ್ಯ ಹೇಳಿದರು.
ಮೈಸೂರಿನ ಮಾನವ ಮಂಟಪದ ಆಶ್ರಯದಲ್ಲಿ ಜರುಗಿದ ಸರಳ ಮದುವೆ ಸಮಾರಂಭದಲ್ಲಿ ಮಾತನಾಡಿ, ‘ಗಾಂಧಿ, ಬಸವ, ಬುದ್ಧ ಮತ್ತು ಅಂಬೇಡ್ಕರ್ ಅವರು ಅಂತರ್ಜಾತಿ ವಿವಾಹಗಳಿಂದ ಜಾತೀಯತೆ ತೊಲಗಿಸಬಹುದು ಎಂಬ ಆಶಯ ಇಟ್ಟುಕೊಂಡು ಕೆಲಸ ಮಾಡಿದ್ದರು. ಅವರ ಆಶಯಕ್ಕೆ ಸಮಾಜ ಪೂರಕವಾಗಿ ಸ್ಪಂದಿಸಿದ್ದರೆ ನಮ್ಮಲ್ಲಿ ಜಾತೀಯತೆ ಈ ರೀತಿ ಬೆಳೆದು ನಿಲ್ಲುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.
ಮೈಸೂರು ಯುವರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ರುದ್ರಯ್ಯ –ದಾಕ್ಷಾಯಿಣಿ ಅವರ ಪುತ್ರ ಆರ್.ರಾಹುಲ್ ಮತ್ತು ಶಕ್ತಿನಗರದ ಎಸ್.ಎಸ್.ಸಿದ್ದರಾಜು –ಕೆ.ಶಿವಮ್ಮ ಅವರ ಪುತ್ರಿ ಎಸ್.ಎಸ್.ಭಾವನಾ ಅವರು ಮಂತ್ರ ಮಾಂಗಲ್ಯದ ವಿವಾಹ ಪ್ರಮಾಣ ವಚನ ಸ್ವೀಕರಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಪ್ರೊ.ಕೆ.ಕಾಳಚನ್ನೇಗೌಡ ವಿವಾಹ ಪ್ರಮಾಣ ವಚನ ಬೋಧಿಸಿದರು. ಕುವೆಂಪು ಅವರ ಮಂತ್ರ ಮಾಂಗಲ್ಯ ವಿವಾಹ ಸಂಹಿತೆಯನ್ನು ಈ ಧನಂಜಯ ಎಲಿಯೂರು ಓದಿದರು. ಪ್ರೊ.ಕೆ.ಟಿ.ಶಿವಣ್ಣ, ಪ್ರೊ.ಚಂದ್ರೇಗೌಡ, ವಡ್ಡಗೆರೆ ಚಿನ್ನಸ್ವಾಮಿ, ಕೆ.ರಾಮಯ್ಯ, ಚಂದ್ರಯ್ಯ, ಪ್ರಸನ್ನಕುಮಾರ್, ಎಸ್.ಪ್ರಭಾಕರ್ ಭಾಗವಹಿಸಿದರು.