ಬುಲೇವಾರ್ಡ್ ರಸ್ತೆಯಲ್ಲಿ ಶನಿವಾರ ನಡೆದ ಚಿತ್ರಸಂತೆ ಉದ್ಘಾಟನಾ ಸಮಾರಂಭದಲ್ಲಿ ಗೊರವರ ಕುಣಿತದ ಮೂಲಕ ಈ ತಂಡ ಗಮನಸೆಳೆಯಿತು. ಕೊರಳಲ್ಲಿ ರುದ್ರಾಕ್ಷಿ ಮಾಲೆ, ಕಚ್ಚೆಪಂಚೆ, ಸೊಂಟಕ್ಕೆ ಕಂಬಳಿ ಸುತ್ತಿಕೊಂಡು ಕವಡೆಗಳಿಂದ ಅಲಂಕೃತಗೊಂಡ ಉಡುಪು ಧರಿಸಿದ ಗೊರವರು, ಡಮರುಗ ಬಾರಿಸುತ್ತ ಮಲ್ಲಿಕಾರ್ಜುನ ಸ್ವಾಮಿ ಕುರಿತ ಹಾಡು ಹೇಳುತ್ತಾ ಲಯಬದ್ಧವಾಗಿ ಹೆಜ್ಜೆ ಹಾಕುತ್ತಿದ್ದರೆ ರಸ್ತೆಯಲ್ಲಿ ಹೋಗುತ್ತಿದ್ದವರೂ ಒಂದು ಕ್ಷಣ ನಿಂತು ನೋಡುವಂತಿತ್ತು.