ಮೈಸೂರು: ‘ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ 3ನೇ ಅಭ್ಯರ್ಥಿ ಗೆಲ್ಲಲು ಜೆಡಿಎಸ್ ಕಾರಣವೇ ಹೊರತು ನಾವಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಇಲ್ಲಿ ಪತ್ರಕರ್ತರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ಗೆಲ್ಲಲು ಕಾಂಗ್ರೆಸ್ ಕಾರಣ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದನ್ನು ಗಮನಿಸಿನೆ. ನಾವು ಹೇಗೆ ಕಾರಣವಾಗುತ್ತೇವೆ, ಅವರೇ ಅಲ್ಲವೇ?’ ಎಂದು ಕೇಳಿದರು.
‘2ನೇ ಅಭ್ಯರ್ಥಿಯನ್ನು ಮೊದಲು ಘೋಷಿಸಿದವರು ಮತ್ತು ನಾಮಪತ್ರ ಸಲ್ಲಿಸಿದ್ದವರು ನಾವು. ಆ ಬಳಿಕ ಜೆಡಿಎಸ್ನವರು ಅಭ್ಯರ್ಥಿ ಹಾಕಿದರು. ಬಿಜೆಪಿಯ 3ನೇ ಅಭ್ಯರ್ಥಿ ಗೆಲ್ಲಬಾರದೆಂಬ ಉದ್ದೇಶವಿದ್ದಿದ್ದರೆ ಮತ್ತು ಜಾತ್ಯತೀತ ನಿಲುವಿನ ಮೇಲೆ ನಂಬಿಕೆ ಇದ್ದಿದ್ದರೆ ಜೆಡಿಎಸ್ನವರು ಅಭ್ಯರ್ಥಿ ಕಣಕ್ಕಿಳಿಸಬಾರದಿತ್ತಲ್ಲವೇ?’ ಎಂದು ತಿರುಗೇಟು ನೀಡಿದರು.
‘ಎಚ್.ಡಿ. ದೇವೇಗೌಡರು ರಾಜ್ಯಸಭೆಗೆ ಸ್ಪರ್ಧಿಸಿದ್ದಾಗ ನಾವು ಅಭ್ಯರ್ಥಿ ಹಾಕಿದ್ವಾ? ಆ ರೀತಿ ಅವರೂ ಬೆಂಬಲಿಸಬೇಕಿತ್ತು. ಅವರು ಮುಖ್ಯಮಂತ್ರಿ ಆಗುವುದಕ್ಕೆ ನಾವು ಬೆಂಬಲಿಸಿರಲಿಲ್ಲವೇ? ಅಲ್ಪಸಂಖ್ಯಾತ ಅಭ್ಯರ್ಥಿ ಸೋಲಲು, ಕೋಮುವಾದಿ ಬಿಜೆಪಿ ಗೆಲ್ಲಲು ಜೆಡಿಎಸ್ನವರೇ ಕಾರಣ’ ಎಂದು ಆರೋಪಿಸಿದರು.
‘ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದಲೇ ನಾವು ಕೆಟ್ಟಿದ್ದು. ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದರಿಂದಲೇ ತೊಡಕಾಯಿತು’ ಎಂದರು.