ಮೈಸೂರು: ಇಲ್ಲಿನ ಕಬಿನಿ ಜಲಾಶಯದ ಹೊರಹರಿವಿನ ಪ್ರಮಾಣವನ್ನು 60 ಸಾವಿರ ಕ್ಯುಸೆಕ್ ಗೆ ಏರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ 10.30 ರಿಂದ ಈ ಪ್ರಮಾಣದಲ್ಲಿ ನೀರು ಹರಿಯಲಿದ್ದು, ರಾತ್ರಿ ಇಲ್ಲವೆ ಶನಿವಾರ ನಂಜನಗೂಡಿನ ಮಲ್ಲನಮೂಲೆ ಮಠ ಸಂಪೂರ್ಣ ಮುಳುಗುವ ಭೀತಿ ಎದುರಾಗಿದೆ. ಮಠದಲ್ಲಿ ಇರುವವರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
ಈಗಾಗಲೇ ಪರಶುರಾಮದೇಗುಲ, ಸ್ನಾನಘಟ್ಟ ಹಾಗೂ ಹದಿನಾರುಕಾಲು ಮಂಟಪಗಳು ಭಾಗಶಃ ಮುಳುಗಿವೆ. ಹಳ್ಳದಕೇರಿಗೆ ನೀರು ನುಗ್ಗಿದೆ.ಸುತ್ತೂರು ಬಳಿಯ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರವನ್ನು ನಿರ್ಬಂಧಿಸಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ಶುಕ್ರವಾರ ನಸುಕಿನಿಂದ ಮಳೆ ಸುರಿದಿದೆ.