ಮೈಸೂರು: ಇಲ್ಲಿನ ಶ್ರೀಕೃಷ್ಣಧಾಮದಲ್ಲಿ ನಡೆಯುತ್ತಿದ್ದ ವಿಶ್ವೇಶತೀರ್ಥ ಸ್ವಾಮೀಜಿ ಅವರ 81ನೇ ಚಾತುರ್ಮಾಸ್ಯ ಹಾಗೂ ವಿಶ್ವಪ್ರಸನ್ನತೀರ್ಥರ 32ನೇ ಚಾತುರ್ಮಾಸ್ಯ ವ್ರತ ಆಚರಣೆ ಶನಿವಾರ ಸಂಪನ್ನಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ, ಪಾಶ್ಚಿಮಾತ್ಯ ಸಂಸ್ಕೃತಿ ವಿರುದ್ಧ ಕಿಡಿಕಾರಿದರು.
ಮೊಬೈಲ್ಗಳು ನಮ್ಮ ಮನೆ ಮನಗಳನ್ನು ಹೊಕ್ಕಿವೆ. ಇದರಿಂದ ಪಾಶ್ಚಾತ್ಯ ಸಂಸ್ಕೃತಿಯ ಕರಾಳ ಛಾಯೆ ನಮ್ಮನ್ನಾವರಿಸುತ್ತಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು. ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಾತ್ಮಿಕವಾದ ಶಕ್ತಿಯನ್ನು ಜೀವನದ ಅಡಿಪಾಯವನ್ನಾಗಿ ಮಾಡಿಕೊಳ್ಳೋಣ. ಆಧ್ಯಾತ್ಮಿಕ ಶಕ್ತಿಯೇ ನಮ್ಮೆಲ್ಲಾ ಯಶಸ್ಸಿಗೆ ತಳಹದಿ. ಇದನ್ನು ಬೆಳೆಸಿಕೊಳ್ಳಲು ಈ ಚಾತುರ್ಮಾಸ್ಯ ಪ್ರೇರಣೆ ನೀಡಿದೆ ಎಂದರು.
ಹಿಂದೂ ಧರ್ಮವನ್ನು ಬಲಪಡಿಸಲು ಪೇಜಾವರದಂತಹ ಶ್ರೀಗಳಿಂದ ಸಾಧ್ಯ. ಇವರು ಹೋದಲೆಲ್ಲಾ ಹೊಸ ಬೆಳಕು ಮತ್ತು ಚೈತನ್ಯ ನೀಡುತ್ತಿದ್ದಾರೆ. ಕತ್ತಲೆ ದೂರವಾಗಿ ಬೆಳಕು ಮೂಡುತ್ತಿದೆ ಎಂದು ಹೇಳಿದರು.
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಶಾಸಕ ಎಸ್.ಎ.ರಾಮದಾಸ್, ಚಾತುರ್ಮಾಸ್ಯ ಆಡಳಿತ ಸಮಿತಿ ಅಧ್ಯಕ್ಷ ಆರ್.ವಾಸುದೇವಭಟ್, ಕಾರ್ಯಾಧ್ಯಕ್ಷ ಎಂ.ಕೃಷ್ಣದಾಸ್ ಪುರಾಣಿಕ್, ರವಿಶಾಸ್ತ್ರಿ, ಉಪಾಧ್ಯಕ್ಷ ಜೆ.ಎಲ್.ಅನಂತ ತಂತ್ರಿ, ಬೆ.ನಾ.ವಿಜಯೇಂದ್ರ ಆಚಾರ್ಯ ಮತ್ತಿತರರು ಇದ್ದರು.