ಮೈಸೂರು: ಇಲ್ಲಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ಗೋದಾಮಿನ ಮೇಲೆ ಶುಕ್ರವಾರ ದಾಳಿ ನಡೆಸಿದ ಉಪವಿಭಾಗಾಧಿಕಾರಿ ಎ.ಸಿ.ವೆಂಕಟರಾಜು ಮತ್ತು ತಹಶೀಲ್ದಾರ್ ರಮೇಶ್ಬಾಬು ನೇತೃತ್ವದ ತಂಡ, 30 ಸಾವಿರ ಸೀರೆಗಳು ಹಾಗೂ ಬಿಜೆಪಿ ಮುಖಂಡ ಸಿ.ಪಿ. ಯೋಗೀಶ್ವರ್ ಭಾವಚಿತ್ರವಿರುವ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾಗರಾಜು ಎಂಬುವವರಿಗೆ ಸೇರಿದ ಈ ಗೋದಾಮನ್ನು ಜಯರಾಮ ಎಂಬುವವರು ಅ. 15ರಿಂದ ನ.15ರವರೆಗೆ ಬಾಡಿಗೆಗೆ ಪಡೆದಿದ್ದರು. ಇಲ್ಲಿ 425 ಚೀಲಗಳಲ್ಲಿ ಒಟ್ಟು 30 ಸಾವಿರ ಸೀರೆಗಳನ್ನು ಸಂಗ್ರಹಿಸಲಾಗಿತ್ತು.
ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಸಂದರ್ಭದಲ್ಲಿ ಹಂಚುವುದಕ್ಕಾಗಿ, ಇಲ್ಲಿ ಸೀರೆಗಳನ್ನು ಇಡಲಾಗಿದೆ ಎಂಬ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಸಂಬಂಧ ತಹಶೀಲ್ದಾರ್ ರಮೇಶ್ಬಾಬು ಅವರು ಗೋದಾಮಿನ ಮಾಲೀಕ ನಾಗರಾಜು ಹಾಗೂ ಎಂ.ಕೆ.ಜಯರಾಮ ಎಂಬುವವರ ವಿರುದ್ಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.