ಮೈಸೂರು: ‘ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗಂಧ ಗಾಳಿ ಗೊತ್ತಿಲ್ಲ. ಏನಾದರೂ ಮಾಹಿತಿ ಸಿಕ್ಕರೆ ನಿಮಗೆ ತಿಳಿಸುತ್ತೇನೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಮೈಸೂರಿನಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ‘ಸಂಪುಟ ಪುನರ್ರಚನೆ ಅಥವಾ ವಿಸ್ತರಣೆ ಮುಖ್ಯಮಂತ್ರಿ ಅವರ ಪರಮಾಧಿಕಾರ. ಅವರು ಏನು ಬೇಕಾದರೂ ಮಾಡಬಹುದು. ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲ’ ಎಂದರು.
‘ಕೆಲವು ಸಚಿವರು ಫೋನ್ ಕರೆ ಸ್ವೀಕರಿಸುತ್ತಿಲ್ಲ ಎಂಬ ಶಾಸಕರ ಆರೋಪದಲ್ಲಿ ಹುರುಳಿಲ್ಲ. ಸಭೆ ಅಥವಾ ತುರ್ತು ಕೆಲಸದಲ್ಲಿ ಇದ್ದಾಗ ಮಾತ್ರ ಸಚಿವರು ಫೋನ್ ಕರೆ ಸ್ವೀಕರಿಸದೇ ಇರಬಹುದು. ಅಂತಹ ಸಮಯದಲ್ಲಿ ಸಚಿವರ ಆಪ್ತ ಸಹಾಯಕರು ಸ್ಪಂದಿಸುವರು. ಯಾವುದೇ ಮಂತ್ರಿಯೂ ಶಾಸಕರುಗಳನ್ನು ಕಡೆಗಣಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಕಾಂಗ್ರೆಸ್ನಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಿದೆ. ಅಲ್ಲಿಂದ ಒಬ್ಬೊಬ್ಬರೇ ಹೊರಗೆ ಬರುತ್ತಿದ್ದಾರೆ. ಅದನ್ನು ಮೊದಲು ಸರಿಪಡಿಸಲಿ’ ಎಂದು ತಿರುಗೇಟು ನೀಡಿದರು.