ಮೈಸೂರು: ಯಾವ ಕೆಲಸಗಳನ್ನು ವಿಶ್ವವಿದ್ಯಾಲಯಗಳು ಮಾಡಬೇಕಿತ್ತೋ ಆ ಕೆಲಸಗಳನ್ನು ಪ್ರತಿಷ್ಠಾನಗಳು ಮಾಡುತ್ತಿವೆ ಎಂದು ವಿದ್ವಾಂಸ ಓ.ಎಲ್.ನಾಗಭೂಷಣಸ್ವಾಮಿ ತಿಳಿಸಿದರು.
ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಇಲ್ಲಿನ ಕಾವೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ‘ಬಸವರಾಜ ಕಟ್ಟೀಮನಿ ಸಾಹಿತ್ಯ ಸಮಕಾಲೀನ ಸಂದರ್ಭ’ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಅಧಿಕಾರದಲ್ಲಿರದ, ಲಾಭವಾಗದ ಸಾಹಿತಿಗಳನ್ನು ವಿಮರ್ಶಿಸುವ ಗುಣ ಕನ್ನಡದಲ್ಲಿಲ್ಲ. ಹಾಗಾಗಿ, ಬಸವರಾಜ ಕಟ್ಟೀಮನಿ ಅವರು ವಿಸ್ಕೃತಿಗೆ ಸರಿದಿದ್ದಾರೆ. ಇವರನ್ನು ನೆನಪು ಮಾಡಿಕೊಳ್ಳುವ ಕೆಲಸವನ್ನು ಪ್ರತಿಷ್ಠಾನ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಇದರ ಜತೆಗೆ, ಕಟ್ಟೀಮನಿಯವರನ್ನೇ ನೆಪ ಮಾಡಿಕೊಂಡು ಕಾದಂಬರಿ ಹಾಗೂ ಕಥನ ಕಲೆಯ ಕುರಿತು ಗಂಭೀರವಾದ ಚಿಂತನೆಗಳನ್ನು ಪ್ರಚೋದಿಸುವ ಕೆಲಸವನ್ನು ಮಾಡಬೇಕು. ಇಂತಹ ಕೆಲಸಗಳು ವಿ.ವಿಗಳಿಂದಾಗಬೇಕಿತ್ತು. ಅವುಗಳಿಂದಾಗದ ಕೆಲಸಗಳನ್ನು ಪ್ರತಿಷ್ಠಾನಗಳು ಮಾಡಬೇಕಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿ ಮನುಷ್ಯರಾಗಿ ಸಮಕಾಲೀನ ಪರಿಸ್ಥಿತಿಗೆ ಸ್ಪಂದಿಸುವಂತಹ ಚಿಂತನೆಯನ್ನು ಬೆಳೆಸದಿದ್ದರೆ ಅಂತಹ ವಿಶ್ವವಿದ್ಯಾಲಯಗಳು ನಿಜಕ್ಕೂ ನಿರುಪಯುಕ್ತ ಎಂದು ಕಿಡಿಕಾರಿದರು.
‘ಸಾಹಿತ್ಯ ಕೃತಿಗಳ ಮೂಲಕ ಸಮಾಜ, ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದು ಅನಗತ್ಯ ಎಂಬ ಕಾಲಘಟ್ಟದಲ್ಲಿ ನಾವಿದ್ದೇವೆ. ಇದರಿಂದಾಗಿಯೇ ಬಸವರಾಜ ಕಟ್ಟೀಮನಿ ಮರೆತು ಹೋಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ವಿಭಾಗದ ಮುಖ್ಯಸ್ಥರಾದ ಡಾ.ಕವಿತಾ ರೈ ಹಾಗೂ ಕುಲಸಚಿವ ಎ.ಆರ್.ರಂಗಸ್ವಾಮಿ ಇದ್ದರು.