ಮೈಸೂರು: ಶಾಸಕ ತನ್ವೀರ್ಸೇಠ್ ಅವರ ಮೇಲಿನ ಹಲ್ಲೆ ಪ್ರಕರಣದ ಹಿಂದೆ ವ್ಯವಸ್ಥಿತವಾದ ಯೋಜನೆ ಹಾಗೂ ಸಂಚು ಇತ್ತು ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಆರೋಪಿ ಫರ್ಹಾನ್ ಪಾಷಾ ಹಲ್ಲೆ ನಡೆಸಿ ಓಡುತ್ತಿದ್ದ ವೇಳೆ ಗೃಹರಕ್ಷಕ ಸಿಬ್ಬಂದಿಯ ಕೈಗೆ ಸಿಕ್ಕಿಬಿದ್ದ. ಬಾಲಭವನದ ಗೇಟಿನ ಮುಂಭಾಗ ಬೈಕ್ಗಳಲ್ಲಿ ನಿಂತಿದ್ದ 7 ಮಂದಿ ಪರಾರಿಯಾದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ಎನ್.ಆರ್.ಕ್ಷೇತ್ರದಲ್ಲಿ ನಡೆದ ಆರ್ಎಸ್ಎಸ್ ಮುಖಂಡ ರಾಜು ಅವರ ಹತ್ಯೆಗೂ ಈ ಪ್ರಕರಣಕ್ಕೂ ಇರುವ ಸಾಮ್ಯತೆಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ರಾಜು ಹತ್ಯೆ ಹಿಂದೆ ಇದೆ ಎನ್ನಲಾದ ಸಂಘಟನೆಯ ಕೈವಾಡದ ಬಗ್ಗೆಯೂ ತನಿಖೆ ಸಾಗಿದೆ.
ಮುಖ್ಯವಾಗಿ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಸೆಪ್ಟೆಂಬರ್ 6ರಂದು ಮಸೀದಿಯೊಂದರಲ್ಲಿ ಧರ್ಮಗುರು ಒಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣ ಹಾಗೂ ಜುಲೈ 30ರಂದು ತ್ರಿಶೂರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡ ನೌಷಾದ್ ಅವರ ಹತ್ಯೆ ಪ್ರಕರಣವನ್ನೂ ಪರಿಶೀಲಿಸಲಾಗುತ್ತಿದೆ.
ಈ ಎಲ್ಲವುಗಳ ಹಿಂದೆ ಸಂಘಟನೆಯೊಂದರ ಕೈವಾಡ ಇದ್ದು, ಮುಸ್ಲಿಂ ಬಲಪಂಥೀಯ ಸಂಘಟನೆಯ ಗುರಿ ಇದೀಗ ಕಾಂಗ್ರೆಸ್ನತ್ತ ಹಾಗೂ ಮುಸ್ಲಿಂ ಸಮುದಾಯದವರತ್ತಲೇ ನೆಟ್ಟಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.